ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ: ಮತ್ತೆ ಮೂವರ ನಾಮಪತ್ರ ಸಲ್ಲಿಕೆ

Last Updated 1 ಏಪ್ರಿಲ್ 2019, 13:16 IST
ಅಕ್ಷರ ಗಾತ್ರ

ಕಲಬುರ್ಗಿ: ‘ಗುಲಬರ್ಗಾ’ ಲೋಕಸಭಾ ಕ್ಷೇತ್ರಕ್ಕೆ ಸೋಮವಾರ ಮೂವರು ನಾಮಪತ್ರ ಸಲ್ಲಿಸಿದರು.ಹಿಂದೆ ಮೂವರು ನಾಮಪತ್ರ ಸಲ್ಲಿಸಿದ್ದು, ಈ ವರೆಗೆ ಒಟ್ಟು ಆರು ಜನ ನಾಮಪತ್ರ ಸಲ್ಲಿಸಿದಂತಾಗಿದೆ.

ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) (ಎಸ್‌ಯುಐಸಿ) ಅಭ್ಯರ್ಥಿಯಾಗಿ ಶರಣಬಸಪ್ಪ ಮಲ್ಲಿಕಾಜಪ್ಪ ಶರ್ಮಾ, ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಆಳಂದ ತಾಲ್ಲೂಕು ಕೆರೂರ ಗ್ರಾಮದ ದತ್ತಪ್ಪ ಕೃಷ್ಣಪ್ಪ ಕೊಂಕಾಟೆ, ಪಕ್ಷೇತರ ಅಭ್ಯರ್ಥಿಯಾಗಿ ಟಿ.ತಿಮ್ಮರಾಜು ನಾಮಪತ್ರ ಸಲ್ಲಿಸಿದರು.

ಶರಣಬಸಪ್ಪ ಅವರು ರೈಲು ನಿಲ್ದಾಣದಿಂದ ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಇವರು ಇಲ್ಲಿಯ ಹಳೆಯ ಜೇವರ್ಗಿ ರಸ್ತೆಯ ಯಶೋಧಾ ಮಕ್ಕಳ ಆಸ್ಪತ್ರೆಯ ಹಿಂಬದಿ ಪ್ರದೇಶದ ನಿವಾಸಿ.

ಟಿ.ತಿಮ್ಮರಾಜು ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಕಸಬಾ ಹೋಬಳಿಯ ಸರ್ಕಾರ ಗುಟ್ಟಹಳ್ಳಿಯವರು. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ. ತಮ್ಮ ಬಳಿ ಇರುವುದು 10 ಸಾವಿರ ನಗದು ಮಾತ್ರ ಎಂದು ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಎಸ್‌ಯುಸಿಐ ಅಭ್ಯರ್ಥಿ ಬೈಕ್‌ ಒಡೆಯ!

ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶರಣಬಸಪ್ಪ ಮಲ್ಲಿಕಾಜಪ್ಪ ಶರ್ಮಾ ತಮ್ಮ ಬಳಿ ಹೀರೋ ಹೊಂಡಾ ಸ್ಪ್ಲೆಂಡರ್‌ ಬೈಕ್‌ ಇದೆ. ₹15 ಸಾವಿರ ನಗದು ಹಾಗೂ ಬ್ಯಾಂಕ್‌ನಲ್ಲಿ ₹89,372 ಠೇವಣಿ, ಪತ್ನಿ ಬಳಿ ₹30 ಸಾವಿರ ಬೆಲೆಯ 10ಗ್ರಾಂ ಚಿನ್ನ ಇದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ.

ಬಿಎ ಪದವೀಧರರಾಗಿರುವ 35 ವರ್ಷದ ಇವರು, ತಮಗೆ ಪ್ಯಾನ್‌ ಕಾರ್ಡ್‌ ಇಲ್ಲ. ಆಶಾ ಕಾರ್ಯಕರ್ತೆಯರ ವೇತನಕ್ಕಾಗಿ ಪ್ರತಿಭಟನೆ ನಡೆಸಿದ್ದಕ್ಕಾಗಿ 2015ರಲ್ಲಿ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ತಮ್ಮ ಮೇಲೆ ಮೊಕದ್ದಮೆ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಎಸ್‌ಯುಸಿಐಸಿ ಅಭ್ಯರ್ಥಿ ಗೆಲ್ಲಿಸಿ’

ಕಲಬುರ್ಗಿ: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿ ಶರಣಬಸಪ್ಪ ಎಂ.ಶರ್ಮಾ ಅವರನ್ನು ಗೆಲ್ಲಿಸಬೇಕು ಎಂದು ಪಕ್ಷದ ಮುಖಂಡರು ಮನವಿ ಮಾಡಿದರು.

ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಮಾತನಾಡಿದಪಕ್ಷದ ರಾಜ್ಯ ಸಮಿತಿಯ ಹಿರಿಯ ಸದಸ್ಯ ಹಾಗೂ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್‌.ವಿ. ದಿವಾಕರ್,ಜನವಿರೋಧಿ, ಬಂಡವಾಳಶಾಹಿ ಪರ ಪಕ್ಷಗಳನ್ನು ಸೋಲಿಸಬೇಕು. ಜನಪರಹೋರಾಟಗಳಿಂದ ಹೊರಹೊಮ್ಮಿದ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ವಿ.ನಾಗಮ್ಮಾಳ್, ಆರ್.ಕೆ. ವೀರಭದ್ರಪ್ಪ, ರಾಮಣ್ಣ ಇಬ್ರಾಹಿಂಪುರ, ಗಣಪತರಾವ್ ಕೆ. ಮಾನೆ, ವಿ.ಜಿ. ದೇಸಾಯಿ, ಮಹೇಶ್ ನಾಡಗೌಡ, ಸೀಮಾ ದೇಶಪಾಂಡೆ, ನಿಂಗಣ್ಣ ಜಂಬಗಿ, ಜಗನ್ನಾಥ ಎಸ್.ಎಚ್., ಮಹೇಶ ಎಸ್.ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT