ಶಹಾಬಾದ್: ‘ಭಾರತಕ್ಕೆ ಸಂವಿಧಾನ ರಚಿಸಿ, ಭದ್ರ ಬುನಾದಿ ಒದಗಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನದ ಶಿಲ್ಪಿ’ ಎಂದು ಕರೆಯುತ್ತಾರೆ ಎಂದು ದಲಿತ ಮುಖಂಡ ಶಿವಶಾಲಕುಮಾರ ಪಟ್ಟಣಕರ್ ಹೇಳಿದರು.
ನಗರದ ಮಹಾದೇವಮ್ಮ ಆಸ್ಪಲ್ಲಿ ಪ್ರೌಢಶಾಲೆಯಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂವಿಧಾನ ಸಮರ್ಪಣೆ ದಿನದ ನಿಮಿತ್ತ ಮಂಗಳವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತದ ಸಂವಿಧಾನದ ಮೂಲ ತತ್ವ ವಿವಿಧತೆಯಲ್ಲಿ ಏಕತೆಯಾಗಿದೆ. ಸಂವಿಧಾನ ನಮ್ಮ ಧರ್ಮಗ್ರಂಥ ಇದ್ಧಂತೆ. ಅಂಬೇಡ್ಕರ್ ಕೊಟ್ಟ ನಮ್ಮ ಸಂವಿಧಾನವು ಜಗತ್ತಿನಲ್ಲಿಯೇ ಉತ್ತಮ ಸಂವಿಧಾನ ಆಗಿದೆ’ ಎಂದು ಹೇಳಿದರು.
ಭಾರತೀಯ ದಲಿತ ಪ್ಯಾಂಥರ್ನ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿ ಮಾತನಾಡಿ,‘ಡಾ.ಅಂಬೇಡ್ಕರ್ ಸಾಕಷ್ಟು ಅಪಮಾನಕ್ಕೆ ಗುರಿಯಾಗಿದ್ದರೂ ದೇಶಕ್ಕೆ ಒಂದು ಉತ್ತಮ ಕೊಡುಗೆ ನೀಡಿದ್ದಾರೆ. ಆ ಸಂವಿಧಾನ ನಮಗೆ ದಾರಿದೀಪವಾಗಿದೆ’ ಎಂದರು.
ಭಾರತೀಯ ದಲಿತ ಪ್ಯಾಂಥರ್ ಉಪಾಧ್ಯಕ್ಷ ಶಂಕರ ಅಳೊಳ್ಳಿ ಮಾತನಾಡಿ, ‘ಸಂವಿಧಾನದ ಮೌಲ್ಯಗಳನ್ನು ಅರಿತು ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿ ಇರುತ್ತದೆ’ ಎಂದು ಅವರು ಹೇಳಿದರು.
ಮುಖ್ಯ ಶಿಕ್ಷಕಿ ಶೋಭಾ ಅರಳಿ, ಪ್ರದೀಪ ಕೋಬಾಳಕರ್, ಮಲ್ಲಿಕಾರ್ಜುನ ಬಾಡಬುಳ, ಆಂಜನೇಯ ಕುಸಾಳೆ, ಸುಭಾಷ ಕಾಂಬಳೆ, ವಿಲಾಸ ಜಾಯಿ, ಶಿವು ಪಗಲಾಪೂರ, ಸೊಪ್ಪಣ್ಣ ಇದ್ದರು. ಶಾಲಾ ಮಕ್ಕಳಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸಿದರು.