ವಾಡಿ: ಸಮೀಪದ ರಾವೂರ- ಚಿತ್ತಾಪುರ ಮಾರ್ಗ ಮಧ್ಯೆ ಯರಗಲ್ ಕ್ರಾಸ್ ಬಳಿ ಸೋಮವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಅಂದಾಜು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, ಹೆಸರು ಮತ್ತು ಊರು ನಿಖರವಾಗಿ ತಿಳಿದುಬಂದಿಲ್ಲ.
ಚಿತ್ತಾಪುರ ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಡಾ.ಪ್ರಶಾಂತ್ ಸರಕಾರ ಎನ್ನುವ ವೈದ್ಯರ ಹತ್ತಿರ ಕಳೆದ ನವೆಂಬರ್ 2ರಂದು ಚಿಕಿತ್ಸೆ ಪಡೆದ ಚೀಟಿ ಅವರ ಜೇಬಿನಲ್ಲಿದೆ. ಚೀಟಿಯಲ್ಲಿ ಮಂಜುನಾಥ ಎಂಬ ಹೆಸರಿದ್ದು, ಇವರೇ ಮಂಜುನಾಥ ಎನ್ನುವ ಬಗ್ಗೆ ಖಾತ್ರಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ವ್ಯಕ್ತಿಯ ತಲೆಗೆ ಮಾರಕಾಸ್ತ್ರಗಳಿಂದ ಪದೇಪದೇ ಕೊಚ್ಚಿದ್ದಾರೆ. ನಂತರ ತಲೆ ಮತ್ತು ಮುಖದ ಮೇಲೆ ಕಲ್ಲು ಹಾಕಿದ್ದಾರೆ.
ವಾಡಿ ಪಿಎಸ್ಐ ವಿಜಯಕುಮಾರ ಬಾವಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.