ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ನಿತ್ಯವೂ ಉರುಳಿ ಬೀಳುತ್ತಿವೆ ಲಾರಿಗಳು!

ಅಪಾಯ ಆಹ್ವಾನಿಸುತ್ತಿರುವ ಹೆದ್ದಾರಿ–149
Last Updated 1 ಡಿಸೆಂಬರ್ 2020, 3:01 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಶಹಾಪುರ– ಶಿವರಾಂಪುರ ಮಾರ್ಗದ ರಾಜ್ಯ ಹೆದ್ದಾರಿ– 149ರಲ್ಲಿ ಬರುವ ಚಿಕ್ಕಲಿಂಗದಳ್ಳಿಯಿಂದ ಶಾದಿಪುರ ಮಾರ್ಗ ಮಧ್ಯೆ ನಿತ್ಯವೂ ಲೋಡ್ ಲಾರಿಗಳು ಉರುಳಿ ಬೀಳುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸಲು ಜನರು ಭಯ ಪಡುವಂತಾಗಿದೆ.

ಕಬ್ಬು, ಕೆಂಪು ಮಣ್ಣು ಸೇರಿದಂತೆ ಸರಕು ಸಾಗಣೆಯ ವಾಹನಗಳು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಓಡಾಡುತ್ತಿವೆ. ರಸ್ತೆಯಲ್ಲಿ ಅಲ್ಲಲ್ಲಿ ತಿರುವುಗಳಿವೆ. ವನ್ಯಜೀವಿ ಧಾಮದ ನಿಯಮಾನುಸಾರ ರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸಿಕೊಳ್ಳಬೇಕು ಎಂಬ ಷರತ್ತುಗಳಿದ್ದರೂ ಗುತ್ತಿಗೆದಾರ ಅದನ್ನು ಪೂರೈಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಈಗ ವಾಹನಗಳು ಉರುಳಿ ಬೀಳುತ್ತಿವೆ ಎಂದು ಸ್ಥಳೀಯ ಮುಖಂಡ ವಸಂತ ತಿಳಿಸಿದ್ದಾರೆ.

ರಸ್ತೆಯನ್ನು ಒಂದೂವರೆ ವರ್ಷದ ಹಿಂದೆ ನಿರ್ಮಿಸಲಾಗಿದೆ. ಪ್ರಸಕ್ತ ವರ್ಷ ಸುರಿದ ಮಳೆಯ ನೀರು ಹರಿದು ಹೋಗುವಾಗ ರಸ್ತೆಯಲ್ಲಿನ ಕೆಂಪು ಮಣ್ಣು ಕೊಚ್ಚಿಕೊಂಡು ಹೋಗಿವೆ. ಇದರಿಂದ ಡಾಂಬರ್ ರಸ್ತೆಯ ಬದಿಗೆ ಭುಜ ಭಾಗದಲ್ಲಿ ಮುರುಮ್ ಇಲ್ಲದ ಕಾರಣ ವಾಹನಗಳು ಸಮತೋಲನ ಕಳೆದುಕೊಂಡು ಉರುಳಿ ಬೀಳುತ್ತಿವೆ ಎಂದು ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿರಂಜೀವಿ ಪಾಪಯ್ಯ ದೂರಿದ್ದಾರೆ.

ಗುತ್ತಿಗೆದಾರರು ರಸ್ತೆ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಎಂಜಿನಿಯರ್‌ಗಳ ಮೇಲುಸ್ತುವಾರಿಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಭಾರಿ ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಕಬ್ಬು ಕುಂಚಾವರಂ, ಶಾದಿಪುರ ಹಾಗೂ ವೆಂಕಟಾಪುರ ಸುತ್ತ ಬೆಳೆಯಲಾಗುತ್ತದೆ. ಆದರೆ ಕಬ್ಬು ಸಾಗಣೆಯ ಲಾರಿಗಳು ರಸ್ತೆಯಲ್ಲಿ ಉರುಳಿ ಬೀಳುತ್ತಿರುವುದರಿಂದ ದ್ವಿಚಕ್ರ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಯಾದಯ್ಯ ಕೋಸಗಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT