ಕಲಬುರಗಿ: ಕೇಂದ್ರ ಸರ್ಕಾರ ಘೋಷಿಸಿದ ಸೇನಾ ನೇಮಕಾತಿಯ ಅಗ್ನಿಪಥ ಯೋಜನೆಗೆ ದೇಶದ ವಿವಿಧೆಡೆ ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು..
ಉತ್ತರ ಭಾರತದ ಹಲವೆಡೆ ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. ಆದರೆ, ಕಲಬುರಗಿಯಲ್ಲಿ ಸಂಚಾರ ರದ್ದಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚನೆಯ ಮೇರೆಗೆ ರೈಲ್ವೆ ನಿಲ್ದಾಣಗಳಿಗೆ ಬಿಗಿ ಭದ್ರತೆ ಒದಗಿಸಲು ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪೊಲೀಸರು ಸರ್ಪಗಾವಲು ತೀವ್ರವಾಗಿದೆ. ಪ್ರಯಾಣಿಕರು ಸೇರಿ ಎಲ್ಲರ ಮೇಲೂ ನಿಗವಹಿಸಲಾಗಿದೆ. ಯುವಕರ ಓಡಾಟದ ಮೇಲೆ ದೃಷ್ಟಿ ಇರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕಲಬುರಗಿ ನಿಲ್ದಾಣ ಸುರಕ್ಷಿತವಾಗಿದೆ. ಆರ್ಪಿಎಫ್ ಮತ್ತು ಜಿಆರ್ಪಿ ಪೊಲೀಸ್ ಪಡೆ ಬಳಸಿಕೊಂಡು ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಪ್ರತಿಭಟನೆ ನಡೆದಿಲ್ಲ. ನಿಲ್ದಾಣ ಮತ್ತು ರೈಲ್ವೆಗೆ ಸಂಬಂಧಿಸಿದ ಆಸ್ತಿ–ಪಾಸ್ತಿಗೆ ಹಾನಿಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಲ ಪಡೆಯಲಾಗಿದೆ ಎಂದು ನಿಲ್ದಾಣದ ವ್ಯವಸ್ಥಾಪಕರು ಹೇಳಿದ್ದಾರೆ.