ಆಳಂದ: ನೂರು ದೇಗುಲ, ಶಾಸನಗಳ ಊರು ಮಾಡಿಯಾಳ ಗ್ರಾಮದಲ್ಲಿ ಶನಿವಾರ ಆಳಂದ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಕಂಡು ಬಂತು.
ಸಮ್ಮೇಳನಾಧ್ಯಕ್ಷ ಪ್ರಭುಲಿಂಗ ನೀಲೂರೆ ಅವರ ಮೆರವಣಿಗೆಯಲ್ಲಿ ವಿವಿಧ ಕಲಾಮೇಳಗಳ ಸಡಗರ, ಕನ್ನಡಾಭಿಮಾನಿಗಳ ಕುಣಿತ, ಉತ್ಸಾಹ ಸಮ್ಮೇಳನಕ್ಕೆ ಕಳೆ ತುಂಬಿತು. ಮಾಡಿಯಾಳ, ಯಳಸಂಗಿ, ನಿಂಬರ್ಗಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಭಾರತ ಸ್ಕೌಟ್ಸ್ , ಗೈಡ್ಸ್ ಹಾಗೂ ಸೇವಾದಳದ ಮಕ್ಕಳ ಆಕರ್ಷಕ ಪಥ ಸಂಚಲನವು ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಆಕರ್ಷಣೆಯಾಗಿತ್ತು.
ಬೆಳಿಗ್ಗೆ ಯಳಸಂಗಿ ಕ್ರಾಸ್ನಿಂದ ಸಮ್ಮೇಳನದ ಅಧ್ಯಕ್ಷ ಪ್ರಭುಲಿಂಗ ನೀಲೂರೆ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮೂಲಕ ಶಂಕರಲಿಂಗ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ ದಿ.ಮಲ್ಲೇಶಪ್ಪ ಬಿರಾದಾರ ವೇದಿಕೆಗೆ ಕರೆತರಲಾಯಿತು.ಸಾರೋಟಿದಲ್ಲಿ ನೀಲೂರೆ ಜೊತೆಗೆ ಮರುಳಸಿದ್ದ ಸ್ವಾಮೀಜಿ, ಡಾ.ಚನ್ನಮಲ್ಲ ಶಿವಾಚಾರ್ಯರು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ ಶೇರಿ ಇದ್ದರು.
ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಲಂಬಾಣಿ ಮಹಿಳೆಯರ ನೃತ್ಯ, ಪಾರಿಜಾತ ಕುಣಿತ, ಭಜನೆಯು ಕಣ್ಮಣ ಸೆಳೆಯಿತು. ಸುತ್ತಲಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾಲು ಸಾಲು ಕನ್ನಡ ಧ್ವಜ ಕೈಯಲ್ಲಿ ಹಿಡಿದು ಕನ್ನಡದ ಜೈಕಾರ ಮೊಳಗಿಸಿ ಸಂಭ್ರಮಿಸಿದರು. ಕಸಾಪ ಪದಾಧಿಕಾರಿಗಳು, ಗ್ರಾಮದ ಯುವಕರು, ಶಿಕ್ಷಕರು ಮೆರವಣಿಗೆ ಮಾರ್ಗದಲ್ಲಿ ಕನ್ನಡ ಗೀತೆ, ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿ ಕನ್ನಡ ಪ್ರೇಮ ಮೆರೆದರು. ನಂತರ ಕಿಕ್ಕಿರಿದು ತುಂಬಿದ ವೇದಿಕೆಯಲ್ಲಿ ಕನ್ನಡ ನಾಡಗೀತೆಯೊಂದಿಗೆ ಅಕ್ಷರದ ಹಬ್ಬಕ್ಕೆ ಚಾಲನೆ ದೊರೆಯಿತು.
ಶಾಸಕ ಸುಭಾಷ್ ಗುತ್ತೇದಾರ್ ಸಮ್ಮೇಳನ ಉದ್ಘಾಟಿಸಿದರು ಮಾಡಿಯಾಳದ ಮರುಳಸಿದ್ದ ಸ್ವಾಮೀಜಿ, ಬಡದಾಳದ ಡಾ.ಚನ್ನಮಲ್ಲ ಸ್ವಾಮೀಜಿ, ಪ್ರಭುಲಿಂಗ ನೀಲೂರೆ, ಹಣಮಂತ ಶೇರಿ, ಪ್ರಕಾಶಕ ಬಸವರಾಜ ಕೊನೇಕ್ ಮಾತನಾಡಿದರು ಗ್ರಾ.ಪಂ. ಅಧ್ಯಕ್ಷೆ ಗುರುಬಾಯಿಕವಲಗಿ, ರಾಜಶೇಖರ ಮಲಶೆಟ್ಟಿ, ಸಂತೋಷ ಹಾದಿಮನಿ, ಆನಂದ ಪಾಟೀಲ, ಬಸವರಾಜ ದೊಡ್ಡಮನಿ, ಸಿದ್ದರಾಮ ಶಿರವಾಳ, ಪ್ರಭು ಸರಸಂಬಿ, ಶ್ರೀಮಂತ ಜಿಡ್ಡೆ, ಶಿವರಾಜ ಅಂಡಗಿ, ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ, ಸಿದ್ದರಾಮ ಪ್ಯಾಟಿ, ವಿಶ್ವನಾಥ ಭಕರೆ, ಅಶೋಕ ರೆಡ್ಡಿ, ಕಲ್ಯಾಣಿ ಸಾವಳಗಿ ಇದ್ದರು. ರವಿಕುಮಾರ ಹೂಗಾರ ನಿರೂಪಿಸಿದರೆ, ಮಲ್ಲಿಕಾರ್ಜುನ
ಬುಕ್ಕೆ ಸ್ವಾಗತಿಸಿದರು. ಅಶೋಕ ಆಳಂದ ಅವರ ತಂಡದಿಂದ ಕನ್ನಡ ಗೀತೆಗಳ ಗಾಯನ, ನಾಡಗೀತೆ ಗಾಯನ ಮನ ಸೆಳೆಯಿತು. ಮಾಡಿಯಾಳ, ಯಳಸಂಗಿ, ನಿಂಬರ್ಗಾ, ಬೆಣ್ನೆಶಿರೂರು, ಹಡಲಗಿ, ದೇವಂತಗಿ, ಜವಳಿ ಸೇರಿದಂತೆ ತಾಲ್ಲೂಕಿನ ವಿವಿಧಡೆಯಿಂದ ಸಾಹಿತ್ಯಾ ಸಕ್ತರು, ಶಿಕ್ಷಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.