ಕಲಬುರ್ಗಿ: ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರಗಳು ಹಾಗೂ ಚಿಂತನೆಗಳು ಸಾರ್ವಕಾಲಿಕ ಎಂದು ಆಳಂತ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಶೀಲವಂತ ಹೇಳಿದರು.
ಆಳಂದ ತಾಲ್ಲೂಕಿನ ಕೆರಿಅಂಬಲಗಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿ ಬ್ಯಾನರ್ ಉದ್ಘಾಟಿಸಿ ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಸಮಾನತೆ, ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೋಳ್ಳಬೇಕೆಂದು ಶೀಲವಂತ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಯುವ ಮುಖಂಡ ಪ್ರೊ.ಯಶವಂತರಾಯ ಅಷ್ಠಗಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಧಾರವಾಹಿಯ ಮುಖಾಂತರ ಅವರ ಸಂದೇಶಗಳನ್ನು ವಿಚಾರಗಳನ್ನು ಮನೆಮನೆಗೆ ತಲುಪುವಂತೆ ಮಾಡುತ್ತಿರುವ ಶಾಸಕಿ ಪ್ರಣೀತಿ ಶಿಂಧೆ ಹಾಗೂ ರಾಘವೇಂದ್ರ ಹುಣಸೂರ ರವರ ಕಾರ್ಯ ಶ್ಲಾಘನೀಯ. ಅವರ ವಿಚಾರಗಳು ಚಿಂತನೆಗಳು ಇಂದಿನ ಯುವ ಜನತೆಗೆ ಹೆಚ್ಚು ತಲುಪಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸಾಹಿತಿ ಡಾ. ಕೆ.ಗಿರಿಮಲ್ಲ ಮಾತನಾಡಿ, ‘ಭಾರತ ಸರ್ವಜನಾಂಗದ ಶಾಂತಿ ತೋಟವಾಗಿದೆ. ಇಲ್ಲಿ ರಕ್ತ ಕ್ರಾಂತಿಗೆ ಜಾಗವಿಲ್ಲ. ಭಗವಾನ್ ಗೌತಮ ಬುದ್ಧ, ಮಹಾತ್ಮ ಗಾಂಧೀಜಿ, ಡಾ. ಅಂಬೇಡ್ಕರ್ ಅವರು ಅಹಿಂಸಾ ಮಾರ್ಗದಿಂದಲೇ ದೇಶದಲ್ಲಿ ಮಹಾಕ್ರಾಂತಿ ಮಾಡಿದ್ದಾರೆ’ ಎಂದು ಬಣ್ಣಿಸಿದರು. ಲೇಖಕ ವಿಠ್ಠಲ ವಗ್ಗನ್ ಕಾರ್ಯಕ್ರಮ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಬಿಜೆಪಿ ಯುವ ಮೋರ್ಚಾಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಕಂಡಿದ್ದ ಅಖಂಡ ಭಾರತದ ಕನಸು ಮುಂದುವರಿಕೊಂಡು ಹೋಗಬೇಗಾದ ಕರ್ತವ್ಯ ಯುವ ಶಕ್ತಿಯ ಮೇಲೆ ಹೆಚ್ಚಿದೆ ಎಂದರು.
ದೇವಣ್ಣ ಕಟ್ಟಿ, ಬಾಬುರಾವ ಜ್ಯೋತಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ವಿಠ್ಠಲ ಸಿರಸಗಿ, ಶಿವಶರಣ ಸಜ್ಜನ, ವಿಠ್ಠಲ್ ಜ್ಯೋತಿ, ಹನುಮಂತ ಜ್ಯೋತಿ, ಶಿವಪ್ಪ ಶೃಂಗೇರಿ, ಅನ್ವರ್ ಜಮಾದಾರ್, ಶ್ರೀಚಂದ್ ಜೈಭೀಮ್ ಶೃಂಗೇರಿ ಆಕಾಶ್, ವಿಕ್ರಂ, ಹಣಮಂತ ನವಲೆ ಇದ್ದರು.
ಮಲ್ಲಿಕಾರ್ಜುನ ಗಡದನ ನಿರೂಪಿಸಿದರು, ಜಿನೇಶ್ ಜ್ಯೋತಿ ಸ್ವಾಗತಿಸಿದರು, ರಾಹುಲ್ ಶೃಂಗೇರಿ ವಂದನಾರ್ಪಣೆ ಮಾಡಿದರು. ಸಂವಿಧಾನದ ಪೀಠಿಕೆಯನ್ನು ಸೋನುಬಾಯಿ ಶೃಂಗೇರಿ ಒದಿದರು.