ಸೇಡಂ: ‘ಜಗತ್ತಿನಲ್ಲಿ ಅಮ್ಮನ ಪ್ರೀತಿಗೆ ಸರಿಸಾಟಿ ಎಂಬುವುದು ಯಾವುದೂ ಇಲ್ಲ. ಅಮ್ಮನಿಗೆ ಅಮ್ಮನ ಪ್ರೀತಿಯೇ ಸಾಟಿ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅಭಿಪ್ರಾಯಪಟ್ಟರು.
ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನದ ವತಿಯಿಂದ ನಡೆದ ಅಮ್ಮ ಪ್ರಶಸ್ತಿ ಪ್ರದಾನ ಹಾಗೂ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ‘ಅಮ್ಮ ತನ್ನ ನೋವಿನ ಪರಾಕಾಷ್ಠೆಯಲ್ಲಿ ಮಗನನ್ನು ಕಾಣುತ್ತಾಳೆ. ಸಾಹಿತ್ಯ ಕ್ಷೇತ್ರದಲ್ಲಿ ಅಮ್ಮ ಪ್ರಶಸ್ತಿ ಹೆಮ್ಮರವಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಕೃತಿ ಕಾರಣಕ್ಕಾಗಿ ಅಮ್ಮ ಪ್ರಶಸ್ತಿ ತನ್ನ ಮಹತ್ವ ಹೆಚ್ಚಿಸಿಕೊಂಡಿದೆ. ಇದು ನಾಡಿನ ಹೆಮ್ಮೆಯ ಪ್ರಶಸ್ತಿಗಳಲ್ಲಿ ಒಂದು’ ಎಂದರು.
ಅಮ್ಮ ಪ್ರಶಸ್ತಿ ಪುರಸ್ಕೃತರು: ಕಿರಣ್ ಭಟ್ (ಪ್ರವಾಸ ಕಥನ), ಕೆ.ಎ ದಯಾನಂದ (ಆತ್ಮವೃತ್ತಾಂತ ಕೃತಿ), ಶ್ರೀನಿವಾಸ ಸಿರನೂರಕರ್ (ವೈಚಾರಿಕ ಕೃತಿ), ಸತ್ಯಮಂಗಲ ಮಹಾದೇವ, ನದೀಂ ಸನದಿ (ಕವನ ಸಂಕಲನ) ಅವರು ಅಮ್ಮ ಪ್ರಶಸ್ತಿ ಪಡೆದರು.
ಅಮ್ಮ ಗೌರವ ಪುರಸ್ಕೃತರು: ಪಿ.ಎಂ.ಮಣ್ಣೂರ (ಮಾಧ್ಯಮ ಕ್ಷೇತ್ರ), ರೇಖಾಬಾಯಿ ಅರಗಲಮನಿ (ದಾನ) ಅವರಿಗೆ ಅಮ್ಮ ಗೌರವ ಪುರಸ್ಕೃರ ಪ್ರದಾನ ಮಾಡಲಾಯಿತು.
ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ನಾಗಣ್ಣ ಅಲ್ಲೂರ ಇದ್ದರು.
ಪ್ರಶಸ್ತಿಯೊಂದಿಗೆ ತೊಗರಿ, ಕೌದಿ
ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಬುರ್ಗಿಯಲ್ಲಿ ಯಥೇಚ್ಛವಾಗಿ ಬೆಳೆಯುವ ತೊಗರಿ ಬೇಳೆ ಮತ್ತು ಅಮ್ಮಂದಿರು ಹೊಲೆದಿರುವ ಕೌದಿಯನ್ನು ಪ್ರದಾನ ಮಾಡಲಾಯಿತು.