ಕಲಬುರ್ಗಿ: ‘ಭೂಲೋಕದ ಅಮೃತ ಎಂದು ಪ್ರಸಿದ್ಧಿಯಾದ ಜೇನುತುಪ್ಪ ಅನೇಕ ಔಷಧಿ ಗುಣಗಳನ್ನು ಹೊಂದಿದೆ. ಸಸ್ಯಗಳಲ್ಲಿ ಪರಾಗಸ್ಪರ್ಶ ಕ್ರಿಯೆಗೂ ಉತ್ತೇಜನಕಾರಿಯಾಗಿದೆ. ಹೀಗಾಗಿ ರೈತರು ಜೇನು ಸಾಕಾಣಿಕೆ ಕೈಗೊಳ್ಳಬೇಕು’ ಎಂದು ಕೊಪ್ಪಳ ಕೃಷಿವಿಸ್ತರಣಾ ಘಟಕದ ವಿಜ್ಞಾನಿ ಡಾ.ಬದರಿಪ್ರಸಾದ ಹೇಳಿದರು.
ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಆಸಕ್ತ ಯುವ ರೈತರಿಗೆ ಜೇನು ಸಾಕಾಣಿಕೆ ತರಬೇತಿಯಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗಳ್ಳಿ, ಜಿಲ್ಲೆಯ ರೈತರು ಜೇನು ಕೃಷಿಯಲ್ಲಿ ಆಸಕ್ತಿ ವಹಿಸುತ್ತಿದ್ದು, ಕೃಷಿಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಪ್ರಗತಿಪರ ರೈತರಾದ ಪಾರ್ವತಯ್ಯ ಸ್ವಾಮಿ, ಅನಿಲಕುಮಾರ ಪಂಪಾಪತಿ, ಮಹೇಶ ಹೊನ್ನಗುಡಿ, ಯೋಜನಾ ನಿರ್ದೇಶಕ ಡಾ.ಆರ್.ಸಿ. ಗುಂಡಪ್ಪಗೋಳ್, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜಹೀರ್ ಅಹಮದ್ ಸ್ವಾಗತಿಸಿದರು. ಡಾ. ವಾಸುದೇವ ನಾಯಕ್ ವಂದಿಸಿದರು. 30 ರೈತರು ತರಬೇತಿ ಪಡೆದರು.