ಕಲಬುರ್ಗಿ: ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ, ಸುವರ್ಣ ಮಹೋತ್ಸವ, ರಜತ ಮಹೋತ್ಸವ ಮತ್ತು ಅಪ್ಪಾ ಪಬ್ಲಿಕ್ ಶಾಲೆಯ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಬಡ್ಡಿ ಟೂರ್ನಿಯಲ್ಲಿ ಅಪ್ಪಾ ಪಬ್ಲಿಕ್ ಶಾಲೆ ಜುಬಿಲಿ ಕಪ್ ತನ್ನದಾಗಿಸಿಕೊಂಡಿತು.
ಶರಣಬಸವೇಶ್ವರ ಪಬ್ಲಿಕ್ ಶಾಲೆ ಹಾಗೂ ಅಪ್ಪಾ ಪಬ್ಲಿಕ್ ಶಾಲೆ ಅಂತಿಮ ಹಣಾಹಣಿಯ ತುರುಸಿನ ಟೂರ್ನಿಗೆ ಸಂಸ್ಥೆಯ ಕಾರ್ಯದರ್ಶಿಗಳು ಬಸವರಾಜ ದೇಶಮುಖ ನಾಣ್ಯ ಚಿಮ್ಮುವುದರ ಮೂಲಕ ಚಾಲನೆ ನೀಡಿದರು. ಟೂರ್ನಿಯಲ್ಲಿ 22 ಪಾಯಿಂಟ್ ಗಳಿಸಿದ ಅಪ್ಪಾ ಪಬ್ಲಿಕ್ ಶಾಲೆಯ ಕ್ರೀಡಾಪಟುಗಳು ವಿಜಯ ಪತಾಕೆ ಹಾರಿಸಿದರು. ಶರಣಬಸವೇಶ್ವರ ಪಬ್ಲಿಕ್ ಶಾಲೆಯು 12 ಪಾಯಿಂಟ್ ಗಳಿಸಿ ರನ್ನರ್ ಅಪ್ ಸ್ಥಾನ ಪಡೆಯಿತು.
ವಿವಿಧ ಪಂದ್ಯಾವಳಿಯಲ್ಲಿ 60 ಶಾಲಾ–ಕಾಲೇಜಿನ ಕ್ರೀಡಾಪಟುಗಳು ಭಾಗವಹಿಸಿದ್ದರು.
ಅಪ್ಪಾ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ಕಬಡ್ಡಿ, ವಾಲಿಬಾಲ್, ಥ್ರೋಬಾಲ್ (ಬಾಲಕ, ಬಾಲಕಿಯರಿಗಾಗಿ) ಟೂರ್ನಿಗೆ ಹಿರಿಯ ಕ್ರೀಡಾಪಟು ಡಾ. ಸಿ. ಹೊನ್ನಪ್ಪ ಪಾರಿವಾಳವನ್ನು ಹಾರಿಸುವುದರ ಮುಖಾಂತರ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಎನ್.ಎಸ್. ದೇವರಕಲ್, ಶಾಲೆಯ ಪ್ರಾಚಾರ್ಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಸಿಬ್ಬಂದಿ ಶುಭ ಹಾರೈಸಿದ್ದಾರೆ.