ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಸ್ನಾತಕೋತ್ತರ ಮತ್ತು ಪ್ರಾದೇಶಿಕ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಇನ್ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮುನಿಕೇಷನ್ ಎಂಜಿನಿಯರ್ಸ್ (ಐಇಟಿಇ) ಉಪ ಶಾಖೆಗೆ ದೇಶದ ಅತ್ಯುತ್ತಮ ಉಪ ಶಾಖೆ ಪ್ರಶಸ್ತಿ ದೊರತಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ಜರುಗಿದ ಸಂಸ್ಥೆಯ 65ನೇ ವಾರ್ಷಿಕ ಸಮ್ಮೇಳನದಲ್ಲಿ ಕಲಬುರಗಿ ಐಇಟಿಇ ಉಪ ಶಾಖೆಯ ಅಧ್ಯಕ್ಷೆ ಡಾ. ಶುಭಾಂಗಿ ಡಿ.ಸಿ., ಕಾರ್ಯದರ್ಶಿ ಪ್ರೊ.ಅಂಬ್ರೇಶ ಭದ್ರಶೆಟ್ಟಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿ, ಅಭಿನಂದಿಸಲಾಯಿತು.
ಕಲಬುರಗಿ ಪ್ರಾದೇಶಿಕ ಕೇಂದ್ರ ನಿರ್ದೇಶಕರೂ ಆಗಿರುವ ಐಇಟಿಇ ಆಡಳಿತ ಮಂಡಳಿ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಅವರ ಮಾರ್ಗದರ್ಶನದಲ್ಲಿ ಡಾ.ಶುಭಾಂಗಿ, ಪ್ರೊ.ಅಂಬ್ರೇಶ ಭದ್ರಶೆಟ್ಟಿ ಅವರ ತಂಡ ಕಳೆದ ಎರಡು ವರ್ಷದಲ್ಲಿ ಮೆಗಾ ಸದಸ್ಯತ್ವ ಅಭಿಯಾನದಲ್ಲಿ 500 ಬೋಧಕರ, 700ಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿಯನ್ನು ಮಾಡಲಾಗಿದೆ.
ಲಸಿಕೆ, ರಕ್ತದಾನ ಶಿಬಿರ, ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜನೆ ಸೇರಿ ನಾನಾ ಕೆಲಸಕಾರ್ಯಗಳನ್ನು ಮನ್ನಿಸಿ ದೇಶದಲ್ಲೇ ಉತ್ತಮ ಉಪ ಶಾಖೆ ಪ್ರಶಸ್ತಿ ನೀಡಲಾಗಿದೆ.
ಐಇಟಿಇ ಅಧ್ಯಕ್ಷ ಡಾ. ಗುಣಶೇಖರ ರೆಡ್ಡಿ, ಡಾ.ಟಿ.ಎಚ್. ಚೌಧರಿ, ಭಾರತೀಯ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರ ಡಾ.ಜಿ.ಸತೀಶ ರೆಡ್ಡಿ, ನಿರ್ಗಮಿತ ಅಧ್ಯಕ್ಷ, ವಿಂಗ್ ಕಮಾಂಡರ್ ಡಾ.ಪ್ರಭಾಕರ, ಐಇಟಿಇ ಉಪಾಧ್ಯಕ್ಷ ಡಾ.ಕೆ. ಜಯ ಶಂಕರ ಇತರರಿದ್ದರು.
ಇದೇ ವೇಳೆ ಐಇಟಿಇ ಆಡಳಿತ ಮಂಡಳಿ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಅವರಿಗೆ ಐಇಟಿಇ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಹಾಗೂ ದಕ್ಷಿಣ ವಲಯದ ಮಾರ್ಗದರ್ಶಕರಾಗಿ ನೇಮಿಸಲಾಯಿತು. ಡಾ. ಶುಭಾಂಗಿ ಅವರನ್ನು ಐಇಟಿಇ ಆಡಳಿತ ಮಂಡಳಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.