ಕಲಬುರ್ಗಿ: ಜಿಲ್ಲೆಯಲ್ಲಿ ತರಕಾರಿ ಬೆಲೆಕೊಂಚ ಇಳಿಕೆಯಾಗಿದ್ದು, ಗ್ರಾಹಕರ ಖುಷಿಗೆ ಕಾರಣವಾಗಿದೆ.
ಕಳೆದ ವಾರದ ಬೆಲೆಗೆ ಹೋಲಿಸಿದರೆ ಈ ವಾರ ಹೀರೆಕಾಯಿ ಬೆಲೆ ಕುಸಿತ ಕಂಡಿದೆ. ಕಳೆದ ವಾರ ಕೆ.ಜಿಗೆ ₹80ರಂತೆ ಮಾರಾಟವಾಗಿದ್ದ ಹೀರೆಕಾಯಿ ದರ ಈ ವಾರ ₹40ಕ್ಕೆ ಕುಸಿದಿದೆ. ಆಲೂಗಡ್ಡೆ ಬೆಲೆಯಲ್ಲೂ ₹20 ಇಳಿಕೆಯಾಗಿದ್ದು ₹20ಕ್ಕೆ ಮಾರಲಾಗುತ್ತಿದೆ. ಈರುಳ್ಳಿ ಬೆಲೆ ಈ ವಾರ ₹10 ಕಡಿಮೆಯಾಗಿದ್ದು ಕೆ.ಜಿಗೆ ₹30ಗೆ ಮಾರಾಟವಾಗುತ್ತಿದೆ.
ಟೊಮೆಟೊ ಬೆಲೆ ₹10 ಕಡಿಮೆಯಾಗಿದ್ದು, ಕೆ.ಜಿಗೆ ₹ 20ರಂತೆ ಮಾರಾಟವಾಗುತ್ತಿದೆ. ಹಾಗಲಕಾಯಿ ಮತ್ತು ಬೆಂಡೆಕಾಯಿ ಬೆಲೆಯಲ್ಲಿ ₹20 ಕಡಿಮೆಯಾಗಿದೆ. ಕ್ರಮವಾಗಿ ₹60 ಮತ್ತು ₹40ಕ್ಕೆ ಮಾರಾಟವಾಗುತ್ತಿದೆ. ಬದನೆಕಾಯಿ ಬೆಲೆಯೂ ಈ ವಾರ ಕಡಿಮೆಯಾಗಿದೆ. ಕಳೆದ ವಾರ ₹50 ಇದ್ದ ಬದನೆ ಈ ವಾರ ಕೆ.ಜಿಗೆ ₹40ರಂತೆ ಮಾರಾಟವಾಗುತ್ತಿದೆ.
ನುಗ್ಗೆಕಾಯಿ, ಮೆಣಸಿನಕಾಯಿ ಮತ್ತು ಡಬ್ಬು ಮೆಣಸಿನಕಾಯಿ ದರ ಸ್ಥಿರವಾಗಿದೆ. ಈ ವಾರ ಬೀನ್ಸ್ ಬೆಲೆ ದುಪಟ್ಟಾಗಿದೆ. ಕಳೆದ ವಾರ ₹40ಕ್ಕೆ ಕೆ.ಜಿ ಮಾರಾಟವಾಗಿದ್ದ ಬೀನ್ಸ್ ಬೆಲೆ ಈ ವಾರ ₹80ಕ್ಕೆ ಜಿಗಿತ ಕಂಡಿದೆ. ಗಜ್ಜರಿ, ಸೌತೆಕಾಯಿ ಬೆಲೆಯೂ ₹20ಕ್ಕೆ ಹೆಚ್ಚಳವಾಗಿದೆ.
ಸೊಪ್ಪಿನ ಆವಕ ಕಡಿಮೆ: ಬಿಟ್ಟು ಬಿಡದೆ ಮಳೆಯಾಗುತ್ತಿರುವುದರಿಂದ ಕೃಷಿ ಚುಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಹೀಗಾಗಿ ಮಾರುಕಟ್ಟೆಗೆ ಸೊಪ್ಪು ಆವಕ ಕಡಿಮೆಯಾಗಿದೆ.
ಮೊಟ್ಟೆ ದರ ಸ್ಥಿರ: ಕಳೆದ ವಾರ ಡಜನ್ಗೆ ₹70ರಂತೆ ಮಾರಾಟವಾಗಿದ್ದ ಮೊಟ್ಟೆಯ ದರದಲ್ಲಿ ಏರುಪೇರಾಗಿಲ್ಲ. ಒಂದೊಂದು ಮೊಟ್ಟೆಯು ಬಿಡಿಯಾಗಿ ₹6ಕ್ಕೆ ಒಂದರಂತೆ ಮಾರಲಾಗುತ್ತಿದೆ.
ಹಣ್ಣುಗಳ ದರ ಇಳಿಕೆ: ‘ಕಳೆದ ವಾರಕ್ಕಿಂತ ಈ ವಾರ ಹಣ್ಣುಗಳ ಬೆಲೆಯಲ್ಲಿ ₹10 ರಿಂದ ₹20 ಇಳಿಕೆಯಾಗಿದೆ. ಗ್ರಾಹಕರು ಖರೀದಿ ನಡೆಸದ ಕಾರಣ ಶೇ 90 ವ್ಯಾಪಾರ ಕುಸಿತ ಕಂಡಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಸುನೀಲ ಚಾವಾಳಕರ.