ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಿನಲ್ಲಿ ಮುಳುಗಿದ 20 ಕಾರುಗಳು

ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಜಲರಾಶಿ
Last Updated 11 ಮೇ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರವೂ ಮಳೆ ಅಬ್ಬರಿಸಿತು. ಸಂಜೆ ಸುಮಾರು ಅರ್ಧಗಂಟೆ ಸುರಿದ ಮಳೆ ನಗರದ ಅವ್ಯವಸ್ಥೆಯನ್ನು ಅನಾವರಣಗೊಳಿಸಿತು. ಕೆಲವು ಕಡೆಗಳಲ್ಲಿ ರಸ್ತೆಗಳು ಕೆರೆಯಂತಾದರೆ, ಇನ್ನೂ ಕೆಲವು ಕಡೆಗಳಲ್ಲಿ ರಸ್ತೆ ಯಾವುದು, ಚರಂಡಿ ಯಾವುದು ಎನ್ನುವುದು ತಿಳಿಯದೆ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು.

ಆಸ್ಟಿನ್‌ಟೌನ್‌ನ ವಿಕ್ಟೋರಿಯಾ ಬಡಾವಣೆಯ ಪಾಮ್‌ಗ್ರೋವ್‌ ರಸ್ತೆಯಲ್ಲಿರುವ ಸಲಾರ್‌ಪುರಿಯಾ ಲಾವಣ್ಯ ರೆಸಿಡೆನ್ಸಿ, ಆಕ್ಸಿಸ್‌ ಬ್ಯಾಂಕ್‌,ನೀಲಗಿರೀಸ್‌ ಮಳಿಗೆ ಮತ್ತು ಪ್ರೆಸ್ಟೀಜ್‌  ಅಪಾರ್ಟ್‌ಮೆಂಟ್‌ ನಿವಾಸಿಗಳ ಪರಿಸ್ಥಿತಿ ಅಕ್ಷರಶಃ ಬೀದಿಗೆ ಬಂದಿತ್ತು. ಯಾರೋ ಮಾಡಿದ ತಪ್ಪಿಗೆ ಅವರು ತೊಂದರೆ ಅನುಭವಿಸಬೇಕಾಯಿತು.

ಈ ರಸ್ತೆಯಲ್ಲಿರುವ ಪಾಮ್‌ಟ್ರಿ ಅಪಾರ್ಟ್‌ಮೆಂಟ್‌ ಎದುರು ಹರಿಯುವ ಮೋರಿಯ ತಡೆಗೋಡೆಯನ್ನು ವ್ಯಕ್ತಿಯೊಬ್ಬರು ಬೆಳಿಗ್ಗೆ ಜೆಸಿಬಿ ಬಳಸಿ ಒಡೆದು ಅದನ್ನು ದುರಸ್ತಿ ಮಾಡದೇ ಹಾಗೇಯೇ ಬಿಟ್ಟು ಹೋಗಿದ್ದರು. ಸಂಜೆ ಮಳೆ ಬಂದಾಗ ಮೋರಿಯ ನೀರು ಉಕ್ಕಿ ಅಪಾರ್ಟ್‌ಮೆಂಟ್‌ಗಳ ನೆಲಮಹಡಿ ಯಲ್ಲಿ ಸುಮಾರು ಐದರಿಂದ ಆರು ಅಡಿಯಗಳವರೆಗೆ ನೀರು ನಿಂತಿತು. ಇದರಿಂದಾಗಿ ಸುಮಾರು 20ಕ್ಕೂ ಹೆಚ್ಚು ಕಾರು ಹಾಗೂ ಹತ್ತಕ್ಕೂ ಹೆಚ್ಚು ಬೈಕ್‌ಗಳು ಮುಳುಗಿದ್ದವು.

‘ಮೋರಿಯ ಗೋಡೆ ಒಡೆಯುವಾಗಲೇ ಆಕ್ಷೇಪ ವ್ಯಕ್ತಪಡಿಸಿ, ವಿಷಯವನ್ನು ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಚುನಾವಣೆ ಬಳಿಕ ನೋಡೋಣ ಎಂದು ಅಲ್ಲಿಂದ ಹೋಗಿದ್ದರು. ಇದೂ ಅಲ್ಲದೇ, ಕೆಲ ನಿವಾಸಿಗಳು ಗೋಡೆ ಒಡೆದ ವ್ಯಕ್ತಿಯ ಪರವಾಗಿ ನಿಂತಿದ್ದರಿಂದ ಎರಡು ಗುಂಪುಗಳಾಗಿ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು’ ಎಂದು ಸ್ಥಳೀಯ ನಿವಾಸಿ ವಾರಿಯರ್‌ ಹೇಳಿದರು.

‘ಚುನಾವಣೆ ಬಂದಾಗ ಬರುವ ಜನಪ್ರತಿನಿಧಿಗಳು ಬಳಿಕ ಈ ಕಡೆ ಮುಖ ಮಾಡುವುದಿಲ್ಲ. ಇಲ್ಲಿಯ ಸಮಸ್ಯೆಗಳ ಬಗ್ಗೆ ಅನೇಕ ಸಲ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಅಪಾರ್ಟ್‌ಮೆಂಟ್‌ ನಿವಾಸಿಗಳ ಕಾರ್‌ಗಳನ್ನು ಪಾರ್ಕ್‌ ಮಾಡಲು ಮೋರಿಯನ್ನು ಕಾಂಕ್ರೀಟ್‌ ಹಾಕಿ ಮುಚ್ಚಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯುವುದಿಲ್ಲ. ಹಾಗಾಗಿ ನೀರು ಉಕ್ಕಿ ರಸ್ತೆಯ ಮೇಲೆ ಹರಿದು ರಸ್ತೆಯ ಇನ್ನೊಂದು ಬದಿಯಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗುತ್ತಿದೆ’ ಎಂದು ನಿವಾಸಿ ಜಯ್‌ ಪ್ರಭು ತಿಳಿಸಿದರು.

ಮರಗಳು ಧರೆಗೆ: ಮಳೆ ಆರಂಭಕ್ಕೂ ಮುನ್ನ ಭಾರಿ ವೇಗದಲ್ಲಿ ಗಾಳಿ ಬೀಸಿದ್ದರಿಂದ ಜೆ.ಪಿ ನಗರ, ನ್ಯೂ ಹಾರಿಜನ್‌ ಸ್ಕೂಲ್‌, ಇಂದಿರಾ ನಗರ, ಹುಳಿಮಾವು, ಬನಶಂಕರಿ ಮೂರನೇ ಹಂತದಲ್ಲಿ ಮರಗಳು ಧರೆ ಗುರುಳಿವೆ. ಎಚ್‌.ಆರ್‌.ಬಿ.ಆರ್‌ ಬಡಾವಣೆ, ಕೇಂಬ್ರಿಡ್ಜ್‌ ವೃತ್ತ, ಬಾಣಸವಾಡಿ, ಚಂದ್ರಾ ಬಡಾವಣೆ, ಕಂಠೀರವ ಕ್ರೀಡಾಂಗಣದಲ್ಲಿ ಮರದ ಕೊಂಬೆಗಳು ಮುರಿದಿವೆ. ಹೆಬ್ಬಾಳದಲ್ಲಿ ರಾಜಕಾಲುವೆ ಉಕ್ಕಿ ಹರಿದಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಸಂಚಾರ ಅವ್ಯವಸ್ಥೆ: ಕೆ.ಎಚ್‌.ರಸ್ತೆ, ಜಯಮಹಲ್‌, ಕೆ.ಆರ್‌.ಪುರ, ಕೋಡೆ ಜಂಕ್ಷನ್‌, ಟ್ರಿನಿಟಿ ವೃತ್ತ ಸೇರಿ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರ ಸಮಸ್ಯೆ ತಲೆದೋರಿತು. ಒಂದು ಗಂಟೆ ಅವಧಿಯಲ್ಲಿ 17.ಮಿ.ಮಿ ಮಳೆ ಸುರಿದಿದೆ.

ಮಳೆಗೂ ಮುನ್ನ ಮತ ಚಲಾಯಿಸಿ
ಸುಳಿಗಾಳಿಯಿಂದಾಗಿ ವಾಯುಭಾರ ಕುಸಿತ ಉಂಟಾಗಿದ್ದು, ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದ್ದು, ಮಳೆ ಬರುವುದರ ಒಳಗಾಗಿ ಮತದಾರರು ಮತದಾನ ಹಕ್ಕು ಚಲಾಯಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT