ಆಳಂದ: ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಯುವಕರು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದು ಸಾಮಾಜಿಕ ಹೋರಾಟಗಾರ, ಚಿತ್ರನಟ ಚೇತನ್ ಅಭಿಮತಪಟ್ಟರು.
ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಭೀಮಾ ಕೋರೇಗಾಂವ ವಿಜಯೋತ್ಸವ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಆಳಂದ ತಾಲ್ಲೂಕಿನ ಭೀಮ ಆರ್ಮಿ ಸಂಘಟನೆಯು ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಮಾನತೆ, ಸಾಮಾಜಿಕ ನ್ಯಾಯದ ತಳಹದಿಯಲ್ಲಿ ರೂಪಗೊಂಡಿರುವ ಹೊಸ ಭಾರತವನ್ನು ಧಾರ್ಮಿಕ ರಾಷ್ಟ್ರವಾಗಿಸುವ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಡಬೇಕಿದೆ ಎಂದರು.
ಧೈರ್ಯ, ಸ್ವಾಭಿಮಾನವು ನಾವೂ ತಿನ್ನುವ ಅನ್ನದಿಂದ ಅಳೆಯಲಾಗದು. ಅನ್ಯಾಯ, ಅಸತ್ಯದ ವಿರುದ್ಧ ಹೋರಾಡುವದು ನಿಜವಾದ ಧೈರ್ಯವಂತಿಕೆಯಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಿಂದ ನಮ್ಮ ಸಮಾಜವು ಹಲವು ಸಮಸ್ಯೆಗಳು ಎದುರಿಸುತ್ತಿದೆ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಯುವ ಸಮೂಹ ಸಿದ್ದಗೊಳ್ಳಲು ಕರೆ ನೀಡಿದರು.
ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿ, ಸಮಾಜದಲ್ಲಿನ ಶೋಷಣೆ, ಅಸಮಾನತೆ ವಿರುದ್ಧ ನಡೆದ ವೈಚಾರಿಕ ಹೋರಾಟಗಳು ಸದಾ ಪ್ರಸ್ತುತವಾಗಿವೆ. ಸಮಾಜ ಸುಧಾರಕರ ವಿಚಾರಗಳು ನಡೆ ನುಡಿಯಲ್ಲಿ ಅನುಸರಣೆಯಾಗಬೇಕು ಎಂದರು.
ಧುತ್ತರಗಾಂವ-ಉಸ್ತುರಿಯ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.