ಕಲಬುರ್ಗಿ: ‘ಗುಲಬರ್ಗಾ’ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ ಎಂಬುದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವರಿಕೆ ಆಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಖರ್ಗೆ ಮತ್ತು ಕಾಂಗ್ರೆಸ್ ಮುಖಂಡರಿಗೆ ಚಾಳಿಯಾಗಿದೆ. ಪ್ರಧಾನಿ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮಯೆಲ್ಲಿದ್ದಾರೆ’ ಎಂದು ಹರಿಹಾಯ್ದರು.
‘ಕುಂದಗೋಳ ಹಾಗೂ ಚಿಂಚೋಳಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಬಹಳ ಅಂತರದಿಂದ ಗೆಲುವು ಸಾಧಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯನವರ ಬಗ್ಗೆ ನೀಡಿರುವ ಹೇಳಿಕೆ ಕೇವಲ ವಿಶ್ವನಾಥ್ ಅವರ ಹೇಳಿಕೆಯಲ್ಲ, ಎಚ್.ಡಿ.ಕುಮಾರಸ್ವಾಮಿ ಹೇಳಬೇಕು ಎಂದಿದ್ದನ್ನು ವಿಶ್ವನಾಥ್ ಮೂಲಕ ಹೇಳಿಸಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಹೇಳಿದರು.
ಕಚ್ಚಾಟ ಉಲ್ಬಣ
‘ರಾಜ್ಯದಲ್ಲಿ ಬರಗಾಲ ಇದೆ. ಸರ್ಕಾರ ಸತ್ತಿದೆಯೋ, ಬದುಕಿದೆಯೋ ಎಂಬ ಭಾವನೆ ಜನರಲ್ಲಿದೆ. ತಾಕತ್ ಇದ್ದರೆ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸಿ ಇಟ್ಟುಕೊಳ್ಳಲಿ. ಅವರು ಕಚ್ಚಾಡಿಕೊಂಡರೆ ನಾವೇನು ಮಾಡೋಣ. ಕಾಂಗ್ರೆಸ್– ಜೆಡಿಎಸ್ ಕಚ್ಚಾಟ ಉಲ್ಬಣಗೊಂಡಿದೆ’ ಎಂದರು.
‘ಸಿದ್ದರಾಮಯ್ಯ ತಾನೊಬ್ಬನೇ ಹಿಂದುಳಿದ ವರ್ಗಗಳ ನಾಯಕ ಅಂತ ತಿಳಿದಿದ್ದಾನೆ. ನಮ್ಮ ದೇಶದ ಪ್ರಧಾನಿಯಾದವರೇ ಅತೀ ಹಿಂದುಳಿದ ಜಾತಿಯವರಾಗಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ’ ಎಂದು ತಿರುಗೇಟು ನೀಡಿದರು.