ಮಂಗಳೂರು: ಬಡಗುತಿಟ್ಟಿನ ಭಾಗವತರಾದ ಸತೀಶ್ ಕೆದ್ಲಾಯ (47) ಭಾನುವಾರ ಕುಂದಾಪುರ ತಾಲ್ಲೂಕಿನ ಹೆಸ್ಕತ್ತೂರು ಗ್ರಾಮದ ಹಾರ್ಯಾಡಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ತಾಯಿ ಹಾಗೂ ಇಬ್ಬರು ಸಹೋದರರು ಇದ್ದಾರೆ.
ಶನಿವಾರ ರಾತ್ರಿ ಭಾಗವತಿಕೆ ಮುಗಿಸಿ ತಮ್ಮ ಮನೆಗೆ ಬಂದಿದ್ದ ಅವರು ಬೆಳಿಗ್ಗೆ ಬಹಳ ಹೊತ್ತಾದರೂ ಏಳದೇ ಇದ್ದಾಗ, ಅಕ್ಕಪಕ್ಕದವರು ಬಾಗಿಲು ಮುರಿದು ಮನೆ ಪ್ರವೇಶಿಸಿದರು. ಆಗ ಸತೀಶ್ ಕೆದ್ಲಾಯರು ತೀರಿಕೊಂಡಿರುವುದು ಗೊತ್ತಾಯಿತು. ಅವರ ಪತ್ನಿ ಮತ್ತು ಮಗ ಮನೆಯಲ್ಲಿ ಇಲ್ಲದೆ ಇದ್ದ ಕಾರಣ ವಿಷಯ ತಿಳಿಯುವುದು ತಡವಾಯಿತು.
ಉಡುಪಿ ಯಕ್ಷಗಾನ ಕೇಂದ್ರದದಲ್ಲಿ ಗುರು ಚಂದ್ರಹಾಸ ಪುರಾಣಿಕ್ ಅವರಿಂದ ಭಾಗವತಿಕೆ ಕಲಿತಿದ್ದ ಅವರು ಪಾರಂಪರಿಕ ಶೈಲಿಯ ಭಾಗವತರು. ಗೋಪಾಡಿ ವಿಠ್ಠಲ ಪಾಟೀಲ್ ಅವರಲ್ಲಿಯೂ ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿದ್ದರು. ಯಕ್ಷಗಾನ ಕೇಂದ್ರದ ಗುರುಗಳಾಗಿ ಕೆಲಸ ಮಾಡಿದ್ದರು. ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರೆಂದೇ ಗುರುತಿಸಿಕೊಂಡಿದ್ದ ಅವರು ಹಲವು ಮೇಳಗಳಲ್ಲಿ ಅತಿಥಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು.
ಕೋಟ ಶಿವರಾಮ ಕಾರಂತರು ಯಕ್ಷಗಾನ ತಂಡವನ್ನು ವಿದೇಶಗಳಿಗೆ ಕರೆದೊಯ್ದಾಗ ಅವರ ತಂಡದಲ್ಲಿಯೂ ಭಾಗವತರಾಗಿ ಕೆಲಸ ಮಾಡಿದ್ದರು. ಬೆಲ್ಜಿಯಂ, ಐರ್ಲೆಂಡ್, ಸಿಂಗಪುರ ಮುಂತಾದ ಕಡೆಗಳಿಗೆ ಪ್ರವಾಸ ಮಾಡಿಯಕ್ಷಗಾನವನ್ನು ಪಸರಿಸಲು ಕಾರಣರಾಗಿದ್ದರು.