ಕಲಬುರಗಿ: ‘ಬರೀ ಸಂಘರ್ಷವೇ ತುಂಬಿರುವ ಇಂದಿನ ಸಮಾಜದಲ್ಲಿ ಶಾಂತಿ ನೆಲೆಸಲು ಬುದ್ಧನ ತತ್ವಗಳು ಅವಶ್ಯಕವಾಗಿವೆ’ ಎಂದು ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸುರೇಶ ಶರ್ಮಾ ಹೇಳಿದರು.
ನಗರದ ಕನ್ನಡ ಭವನದಲ್ಲಿ ದೇವಿಂದ್ರಪ್ಪ ಜಿಸಿ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ವರ್ಷಾವಾಸ ನಮ್ಮ ನಡೆ ಬುದ್ಧನೆಡೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮನೆ ಮನೆಗಳಲ್ಲಿ ಧಮ್ಮದೀಪ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಮೂಲಕ ಆಧುನಿಕತೆಯ ಭರಾಟೆಯ ಗಡಿಬಿಡಿ ಜೀವನಕ್ಕೆ ಬುದ್ಧನ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಆಗಬೇಕು. ನೆಮ್ಮದಿ ಜೀವನಕ್ಕೆ ಧಮ್ಮದೀಪ ರಹದಾರಿಯಾಗಲಿದೆ’ಎಂದರು.
ಸಂಸ್ಥೆಯ ಅಧ್ಯಕ್ಷ ಸಿದ್ದಾರ್ಥ ಚಿಮ್ಮಾಇದಲಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಎಸ್.ಬಿ. ಹರಿಕೃಷ್ಣ, ಪುಂಡಲೀಕ ಹೇರೂರ, ಮಡಿವಾಳ ದೊಡ್ಡಮನಿ, ತುಕಾರಾಮ ತಳವಾರ, ಸುಭಾಷ ಚಕ್ರವರ್ತಿ, ಸುರೇಶ, ಕುಸುಮಕರ್, ಎಂ.ಬಿ. ನಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಧಮ್ಮಜ್ಯೋತಿ ಭಂತೆ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ.ಟಿ. ಕಾಂಬಳೆ, ಸುಧೀರ ಸಂಗೋಳಗಿ, ಸಂಧ್ಯಾ ಕಾನೇಕರ್, ಶಂಕರ ಕೋಡ್ತಾ, ಸೂರ್ಯಕಾಂತ ಮಾಲೆ, ಅರ್ಜುನ ಭದ್ರೆ, ಡಾ.ಕೆ.ಎಸ್. ಬಂಧು ಇತರರು ಇದ್ದರು.