ಕಾಳಗಿ (ಕಲಬುರ್ಗಿ ):ತಾಲ್ಲೂಕಿನ ಕೋಡ್ಲಿಗ್ರಾಮದ ಬಳಿ ಎತ್ತಿನ ಬಂಡಿ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿವೆ. ಬಂಡಿ ಓಡಿಸುತ್ತಿದ್ದ ರೈತ, ಆತನ ಮಗ ಹಾಗೂ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿವೆ.
ಮೂರು ಜನ ಶಿಕ್ಷಕಿಯರನ್ನು ಕೊಂಡೊಯ್ಯುತ್ತಿದ್ದ ಕಾರು ಕಲಬುರ್ಗಿ ಕಡೆಯಿಂದ ಚಿಂಚೋಳಿ ತಾಲ್ಲೂಕಿನ ಸುಲೇಪೇಟಕ್ಕೆ ತೆರಳುತಿತ್ತು.
ಸುಲೇಪೇಟ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆಯ ಶಿಕ್ಷಕಿಯರಾದ ಫರೀದಾ, ನಾಜಿಯ, ಫಿರ್ದೋಸ್ ಸಬಾ, ಕಾರಿನ ಚಾಲಕ ಮಹ್ಮದ್ ಗಯಾಜೊದ್ದೀನ್ ಮತ್ತು ಜೊತೆಗಾರ ಯುವಕನಿಗೆ ಗಾಯವಾಗಿದೆ.
ಈ ಎಲ್ಲರಿಗೆ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.
ಎತ್ತಿನ ಬಂಡಿ ಹೊಡೆಯುತ್ತಿದ್ದ ನಾಗಪ್ಪ ಅವರಿಗೆ ಕೋಡ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತ ಎರಡು ಎತ್ತು, ಮುರಿದ ಬಂಡಿ ಸೇರಿ ರೈತನಿಗೆ ಎರಡು ಲಕ್ಷ ಮೌಲ್ಯದಷ್ಟು ನಷ್ಟವಾಗಿದೆ.
ಸ್ಥಳಕ್ಕೆ ರಟಕಲ್ ಠಾಣೆ ಪಿಎಸ್ಐ ಶಿವಶಂಕರ ಸುಬೇದಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.