ಚಿಂಚೋಳಿ: ಜಿಲ್ಲೆಯ ಯಶಸ್ವಿ ನೀರಾವರಿ ಯೋಜನೆ ಎಂಬ ಖ್ಯಾತಿ ಹೊಂದಿರುವ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರು ಗೇಟುಗಳನ್ನು ಎತ್ತಿ ನದಿಗೆ ಬಿಡಲಾಗುತ್ತಿದೆ ಎಂದು ಯೋಜನೆಯ ಎಇಇ ವೈಜನಾಥ ಅಲ್ಲುರೆ ತಿಳಿಸಿದ್ದಾರೆ.
ಸರನಾಲಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಜಲಾಶಯದ ಗರಿಷ್ಠ ಮಟ್ಟ ಸಮುದ್ರಮಟ್ಟದಿಂದ 1,618 ಅಡಿಯಿದ್ದು ಬುಧವಾರ ಸಂಜೆ 1,617.5 ಅಡಿ ತಲುಪಿದ್ದರಿಂದ ಒಳಹರಿವು ಗಮನದಲ್ಲಿಟ್ಟುಕೊಂಡು ನದಿಗೆ ನೀರು ಬಿಡಲಾಗುತ್ತಿದೆ.
ಜಲಾಶಯದ ಎರಡು ಗೇಟುಗಳನ್ನು ತಲಾ ಒಂದು ಅಡಿ ಎತ್ತರ ಎತ್ತಿ ನೀರು ಹರಿ ಬಿಡುತ್ತಿರುವುದರಿಂದ ಸರನಾಲಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಗ್ರಾಮದ ಪ್ರವೇಶದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯ ಮನಮೋಹಕವಾಗಿ ಗೋಚರಿಸುತ್ತಿದೆ.
ಬುಧವಾರ ಸಂಜೆಗೆ ಚಂದ್ರಂಪಳ್ಳಿ ಸುತ್ತಲೂ ಭಾರಿ ಮಳೆ ಸುರಿದಿದೆ. ಹೀಗಾಗಿ ಜಲಾಶಯದ ಒಳಹರಿವು ಕೇವಲ 36.70 ಕ್ಯುಸೆಕ್ ಇದೆ. ಆದರೆ ಗರಿಷ್ಠ ಮಟ್ಟ ತಲುಪಿದ್ದರಿಂದ ನೀರು ಹೊರ ಬಿಡಲಾಗುತ್ತಿದೆ ಎಂದು ವೈಜನಾಥ ಅಲ್ಲುರೆ ಪ್ರಜಾವಾಣಿಗೆ ತಿಳಿಸಿದರು.
ನರನಾಲಾ ನದಿ ಮುಲ್ಲಾಮಾರಿ ನದಿಯ ಉಪನದಿಯಾಗಿದ್ದು ನದಿಗೆ ಜಲಾಶಯದ ನೀರು ಬಿಟ್ಟಿದ್ದರಿಂದ ಮುಲ್ಲಾಮಾರಿ ನದಿಯಲ್ಲಿಯೂ ಪ್ರವಾಹ ಕಾಣಿಸುತ್ತಿದೆ. ಹೀಗಾಗಿ ಜನರು ನದಿಗೆ ಇಳಿಯುವುದಾಗಲಿ, ಜಾನುವಾರುಗಳನ್ನು ಮನೆಗೆ ಕರೆದೊಯ್ಯುವುದಾಗಲಿ ಮಾಡುವಾಗ ಜಾಗೃತೆವಹಿಸಬೇಕು ಎಂದು ಮನವಿ ಮಾಡಿದ್ದಾರೆ.