ಚಿಂಚೋಳಿ: ರಾಜ್ಯ ಬಿಜೆಪಿ ಸರ್ಕಾರ ಚಿಂಚೋಳಿ ಮತಕ್ಷೇತ್ರದ ಅವೃದ್ಧಿಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಹಾಗೂ ಪ್ರಾಂತ ರೈತ ಸಂಘಗಳು ಮಂಗಳವಾರ ಕರೆ ನೀಡಿದ್ದ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ದ್ಚಿಚಕ್ರವಾಹನ, ಕಾರು, ಜೀಪ್ಗಳು ಎಂದಿನಂತೆ ಸಂಚರಿಸಿದವು. ಸಾರಿಗೆ ಸಂಸ್ಥೆಯ ಬಸ್ಗಳು ರಸ್ತೆಗಿಳಿಯಲಿಲ್ಲ. ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಅನರ್ಹ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಪ್ಯಾಕೇಜ್ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಚಿಂಚೋಳಿ ಮರೆತಿದ್ದಾರೆ. ಇಲ್ಲಿಗೂ ಪ್ಯಾಕೇಜ್ ನೀಡಿ ಅಭಿವೃದ್ಧಿಪಡಿಸಬೇಕು, ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಕಬ್ಬು ಬೆಳೆಗಾರರ ಹಿತ ಕಾಯಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಯಾವ ಸಾಲ ಹೆಚ್ಚು ಇದೆಯೋ ಅದನ್ನು ಮನ್ನಾ ಮಾಡಿ ರೈತನ ಹಿತರಕ್ಷಿಸದೆ ಕಡಿಮೆ ಮೊತ್ತದ ಸಾಲ ಮನ್ನಾ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಟೀಕಿಸಿದರು.
ಮುಲ್ಲಾಮಾರಿ ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂಬ ಮನವಿಯನ್ನು ತಾಲ್ಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಅವರು ಗ್ರೇಡ್–2 ತಹಶೀಲ್ದಾರ್ ಮಾಣಿಕ್ ಘತ್ತರಗಿ ಅವರಿಗೆ ಸಲ್ಲಿಸಿದರು.
ಮಾಜೀದ್ ಪಟೇಲ್, ನಾಗೇಂದ್ರ ಗುರಂಪಳ್ಳಿ, ಸಂತೋಷ ಕೆರೋಳ್ಳಿ, ಸುನಂದಾ ಶಿರೋಳ್ಳಿ, ವಿಶ್ವಾಸ ಜಗದಾಳೆ, ಮನೋಹರ ಕೊರವಿ, ಸಿದ್ದಯ್ಯ ಸ್ವಾಮಿ ಕಪೂರ ಬಸವರಾಜ ವಾಡಿ, ಶ್ರೀಮಂತ, ವಿಜಯಕುಮಾರ ಶಾಬಾದಿ, ಮಗ್ದುಮ್ ಖಾನ್ ಇದ್ದರು.