ಚಿಂಚೋಳಿ (ಕಲಬುರಗಿ): ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ತಂದೆ, ಮಗ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾದರು.
ರಾಜಪ್ಪ ಭೋವಿ(40) ಹಾಗೂ ಆತನ ಪುತ್ರ ಮಹೇಶ (12) ಶವವಾಗಿ ಪತ್ತೆಯಾದವರು.
ಮಂಗಳವಾರ ರಾಜಪ್ಪ ಸೇರಿ ಒಟ್ಟು ಐದು ಮಂದಿ ಮೀನು ಹಿಡಿಯಲು ಹೋಗಿದ್ದರು. ಕಾಲುವೆಗೆ ಇಳಿದ ರಾಜಪ್ಪ ಮತ್ತು ಮಹೇಶ ಇಬ್ಬರೂ ತುಂಬಾ ಹೊತ್ತಿನವರೆಗೆ ಮೇಲೆ ಬರಲಿಲ್ಲ. ಇದರಿಂದ ಆತಂಕಗೊಂಡ ಮೀನುಗಾರರು ಮತ್ತು ಗ್ರಾಮಸ್ಥರು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದರು.
ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ತಂದೆ, ಮಗನಿಗಾಗಿ ಶೋಧ ಕಾರ್ಯ ನಡೆಸಿದ್ದರು ಪತ್ತೆಯಾಗಲಿಲ್ಲ. ರಾತ್ರಿ ಆಗಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
ಬುಧವಾರ ಬೆಳಿಗ್ಗೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾಲುವೆಯಲ್ಲಿ ಇಳಿದು ಶೋಧಿಸಿದಾಗ ಇಬ್ಬರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.