ಇದರಾಚೆಗೂ ನನ್ನೊಳಗಿನ ಮಾನವೀಯ ತುಡಿತ ನಿಲ್ಲುವುದಿಲ್ಲ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರೂ ಹೆಚ್ಚಿಗೆ ಶ್ರಮ ಹಾಕಿದರೆ ಆದಷ್ಟು ಬೇಗ ಕೊರೊನಾ ಹೊರಗಟ್ಟಲು ಸಾಧ್ಯ. ಬರವಣಿಗೆ ಹಾಗೂ ಗಾಯನ ಅಭ್ಯಾಸವೂ ನನಗಿದೆ. ಆ ಕ್ಷೇತ್ರದಲ್ಲಿನ ಸಾಧನೆಗೆ ಬಂದ ಸಾವಿರಾರು ರೂಪಾಯಿಗಳನ್ನು ಹಾಗೇ ಇಟ್ಟಿದ್ದೆ. ಅದೇ ಹಣದಿಂದ ದಿನಸಿಗಳನ್ನು ಕಳೆದ ಎರಡೂವರೆ ತಿಂಗಳಿಂದ ವಿತರಿಸುತ್ತಿದ್ದೇನೆ. ಇದು ನನಗೆ ಖುಷಿ ಕೊಡುತ್ತಿದೆ. ಅನಾಥಾಶ್ರಮ, ವೃದ್ಧಾಶ್ರಮ, ಬಾಲ ಮಂದಿರಗಳಲ್ಲಿ ಸೇವೆ ನೀಡುವುದು ಎಂದಿನ ಖಯಾಲಿ. ಕೊರೊನಾದಲ್ಲೂ ಅದನ್ನು ಮುಂದುವರಿಸಿದ್ದೇನೆ. ಪ್ರತಿ ದಿನ ನನ್ನ ಅಡುಗೆ, ಉಡುಗೆ ಜವಾಬ್ದಾರಿ ನನ್ನದೇ. ಮನೆಯಲ್ಲೂ ಸುರಕ್ಷಿತ ಅಂತರ ಅನಿವಾರ್ಯವಾಗಿದೆ.