ಚಿಂಚೋಳಿ: ಪಟ್ಟಣದ ಹೊರವಲಯ ಹಾಗೂ ತಾಲ್ಲೂಕಿನ ದೇಗಲಮಡಿಯಲ್ಲಿ ಭಾನುವಾರ ಸಂಭವಿದ ಎರಡು ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ ಇಬ್ಬರು ಮೃತಪಪಟ್ಟಿದ್ದಾರೆ.
ದೇಗಲಮಡಿಯಲ್ಲಿ ಗ್ರಾಮದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಮಾರ್ಗದ ತಂತಿ ತಗುಲಿಜಗನ್ನಾಥ ತಿಪ್ಪಣ್ಣ ಬಸಂತಪುರ (35) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಗೆಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಬೆಳಿಗ್ಗೆ ಮೇಕೆಗಳಿಗೆ ಮೇವು ತರಲು ಹೊಲಕ್ಕೆ ತೆರಳಿದಾಗ ವಿದ್ಯುತ್ ತಂತಿ ಹರಿದು ಬಿದ್ದಿತ್ತು. ಅದನ್ನು ಬದಿಗೆ ಸರಿಸಿ ಮುಂದಕ್ಕೆ ಹೋಗುವಾಗ ತಂತಿ ತಗುಲಿದೆ ಎಂದು ತಿಳಿಸಲಾಗಿದೆ.ಮೃತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನಗೊಳಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ:
ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಜ್ಯೋತಿ ವಿದ್ಯುತ್ ಮಾರ್ಗದ ಕಾಮಗಾರಿ ನಡೆಸಲಾಗುತ್ತಿದೆ. ವಿದ್ಯುತ್ ಕಂಬಗಳು ಭೂಮಿಯ ಮೇಲ್ಮಟ್ಟದಲ್ಲಿ ಹಾಕಿದ್ದರಿಂದ ಈಚೆಗೆ ಸುರಿದ ಮಳೆಗೆ ಹತ್ತಾರು ಕಂಬಗಳು ಧರೆಗುರುಳಿವೆ. ಮಾರ್ಗದ ಮಧ್ಯದಲ್ಲಿ ಕಂಬ ಉರುಳಿದ್ದರಿಂದ ಎರಡು ಬದಿಗೆ ಸುಸ್ಥಿತಿಯಲ್ಲಿವೆ. ಒಂದು ಬದಿಯಿಂದ ವಿದ್ಯುತ್ ಮಾರ್ಗ ಗ್ರಾಮಕ್ಕೆ ಪೂರೈಕೆಯಾಗುತ್ತಿದೆ. ಆಗ ಧರೆಗುರಳಿದ ನಿರಂತರ ಜ್ಯೋತಿಯ ವಿದ್ಯುತ್ ಕಂಬದ ತಂತಿಗಳು ಒಂದಕ್ಕೊಂದು ಸಂಧಿಸಿದ್ದರಿಂದ ನಲಕ್ಕುರುಳಿದ ತಂತಿಯಲ್ಲಿ ವಿದ್ಯುತ್ ಹರಿದಿದೆ. ಆಗ ಮೇವು ತರಲು ಹೊಲಕ್ಕೆ ಹೊದಾಗ ಎಂದಿನಂತೆ ತಂತಿ ಬದಿಗೆ ಸರಿಸಲು ಹೋದಾಗ ವಿದ್ಯುತ್ ತಗುಲಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನಿಡಿದ ಶಾಸಕ ಡಾ.ಅವಿನಾಶ ಜಾಧವ, ಮೃತನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಬಿಜೆಪಿ ಮುಖಂಡ ಚಂದ್ರಶೇಖರ ಗುತ್ತೇದಾರ ಮೃತನ ಕುಟುಂಬದ ಸದಸ್ಯರಿಗೆ ₹ 5 ಸಾವಿರ ನೆರವು ನೀಡಿದರು. ತಹಶೀಲ್ದಾರ್ ಪಂಡಿತ ಬಿರಾದಾರ, ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ರಾಜು ಕುಲಕರ್ಣಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪರಮೇಶ್ವರ ಬಿರಾದಾರ ಕೂಡ ಭೇಟಿ ನೀಡಿ, ಮಾಹಿತಿ ಪಡೆದರು.
ಇನ್ನೊಂದೆಡೆ, ಪಟ್ಟಣ ಹೊರವಲಯದಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದು, ತಾಲ್ಲೂಕಿನ ಶಿವರಾಮ ನಾಯಕ ತಾಂಡಾದ ಹರಿಸಿಂಗ್ ರಾಠೋಡ (38) ಅವರು ಮೃತಪಟ್ಟಿದ್ದಾರೆ.
ಮೃತನಿಗೆ ಇಬ್ಬರು ಪತ್ನಿಯರು, ನಾಲ್ವರು ಮಕ್ಕಳು ಇದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಾಸಕ ಡಾ.ಅವಿನಾಶ ಜಾಧವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.