ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಎಚ್‌.ಕೆ ಪಾಟೀಲ್‌

Last Updated 6 ಮೇ 2018, 8:25 IST
ಅಕ್ಷರ ಗಾತ್ರ

ಗದಗ: ‘ಚುನಾವಣಾ ಪ್ರಚಾರ ಸಭೆಗಳಲ್ಲಿ ಸುಳ್ಳಿನ ಸರಮಾಲೆ ಹೆಣೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಗದಗ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ್‌ ಹೇಳಿದರು.

ಭಾನುವಾರ ಗದಗದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಚುನಾವಣಾ ಭಾಷಣದಲ್ಲಿ ಹಸಿ ಸುಳ್ಳು ಹೇಳುತ್ತಿದ್ದು, ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ.ಇದು ಚುನಾವಣಾ ಅವ್ಯವಹಾರ.ಇದರ ವಿರುದ್ಧ ತ್ವರಿತ ಕ್ರಮ ವಹಿಸುವಂತೆ, ಐಪಿಸಿ ಮತ್ತು ಜನಪ್ರತಿನಿಧಿ ಕಾಯ್ದೆಯಡಿ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದರು.

‘ಕರ್ನಾಟಕದ ರಾಜಕೀಯ ಘಟನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮೋದಿ ಅವರು ಮಹದಾಯಿ ಬಗ್ಗೆ ಮಾತನಾಡಿದ್ದಾರೆ. ಸೋನಿಯಾ ಗಾಂಧಿ ಅವರು 2007ರಲ್ಲೇ ‘ಮಹದಾಯಿ ಯೋಜನೆಗೆ ತಮ್ಮ ವಿರೋಧ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ದೇಶದ ಪ್ರಧಾನಿಗೆ ಈ ಕುರಿತು ಕನಿಷ್ಠ ಮಾಹಿತಿಯೂ ಇಲ್ಲದಿರುವುದು ಖೇದಕರ ಎಂದ ಅವರು ಅಂದಿನ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಪ್ರದರ್ಶಿಸಿದರು. 

‘2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಮಹದಾಯಿ ವಿವಾದದ ಕುರಿತು ನ್ಯಾಯಮಂಡಳಿಗೆ ದೂರು ನೀಡಿತು. ಈ ವಾಸ್ತವಾಂಶವನ್ನು ಮರೆಮಾಚಿ, ಮೋದಿ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಕಳಸಾ – ಬಂಡೂರಿ ಯೋಜನೆಗೆ ಅನುಮತಿ ಪಡೆದುಕೊಂಡಿದ್ದೇ ಕಾಂಗ್ರೆಸ್’ ಎಂದರು.

‘ಮಹದಾಯಿ ವಿಷಯದಲ್ಲಿ ರಾಜಕೀಯ ನಾಟಕ ಮಾಡಲು ಹೋಗಿ ಬಿ.ಎಸ್‌.ಯಡಿಯೂರಪ್ಪ ಅವರು ಈಗಾಗಲೇ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಈಗ ಅದೇ ಮಾದರಿಯನ್ನು ಮೋದಿ ಹಿಡಿದಿದ್ದಾರೆ. ಸುಳ್ಳಿನ ಸರಮಾಲೆ ಮೂಲಕ ಮೋದಿ ಅವರ ನೈಜ ವ್ಯಕ್ತಿತ್ವ ರಾಜ್ಯದಲ್ಲಿ ಅನಾವರಣಗೊಂಡಿದೆ’ ಎಂದು ಎಚ್‌.ಕೆ ಪಾಟೀಲ ಲೇವಡಿ ಮಾಡಿದರು.

‘ಕಪ್ಪತಗುಡ್ಡ ಸಂರಕ್ಷಣೆಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದು ಗದುಗಿನ ತೋಂಟದಾರ್ಯ ಮಠದ ಸ್ವಾಮೀಜಿ. ಆದರೆ, ಇದು ಬಿಜೆಪಿ ಹೋರಾಟದ ಫಲ ಎಂದು ಪ್ರಧಾನಿ ಮತ್ತೊಂದು ದೊಡ್ಡ ಸುಳ್ಳು ಹೇಳಿದ್ದಾರೆ. 2011ರಲ್ಲಿ ಪೋಸ್ಕೊ ಕಂಪೆನಿ ಮೂಲಕ ಕಪ್ಪತಗುಡ್ಡ ಕಬಳಿಸುವ ಹುನ್ನಾರ ಮಾಡಿದ್ದು ಯಾರು, ಆಗ ನೀವು ಎಲ್ಲಿದ್ದೀರಿ, ಈಗ ಜೈಲು, ಬೇಲು ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಏನು ಹೇಳುತ್ತಿದ್ದೀರಿ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT