ಕಲಬುರ್ಗಿ: ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಹೊಲದಲ್ಲಿ ಬೆಳೆದ 25 ಕೆ.ಜಿ.ಯಷ್ಟು ಗಾಂಜಾವನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಸತೀಶಕುಮಾರ ತಿಳಿಸಿದ್ದಾರೆ.
ಗಾಂಜಾ ಬೆಳೆದ ಶಿವಪ್ಪ ಬಕಾರಿ (42) ಮತ್ತು ದೇವೇಂದ್ರಪ್ಪ ಬಕಾರಿ (48) ಬಂಧಿತರು. ಇಬ್ಬರೂ ಸಹೋದರರಾಗಿದ್ದಾರೆ ಎನ್ನಲಾಗಿದೆ.
ತೊಗರಿ ಬೆಳೆಯ ನಡುವೆ ಗಾಂಜಾವನ್ನು ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿಯಂತೆ ಡಿಸಿಪಿ ಕಿಶೋರಬಾಬು ಮತ್ತು ಅಪರಾಧ ವಿಭಾಗದ ಡಿಸಿಪಿ ಶ್ರೀಕಾಂತ ಕಟ್ಟಿಮನಿ, ಸಿ ಉಪ ವಿಭಾಗದ ಎಸಿಪಿ ಜೆ.ಎಚ್.ಇನಾಮದಾರ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ತಮ್ಮರಾಯ ಪಾಟೀಲ ಮತ್ತು ಸಿಬ್ಬಂದಿ ದಾಳಿ ನಡೆಸಿದರು.
ತೊಗರಿ ಹೊಲದಲ್ಲಿ ಇನ್ಸ್ಪೆಕ್ಟರ್ ತಮ್ಮರಾಯ ಮತ್ತು ಪೊಲೀಸ್ ಸಿಬ್ಬಂದಿ ಶೋಧ ನಡೆಸಿ 101 ಗಾಂಜಾ ಗಿಡಗಳನ್ನು ಹಾಗೂ 450 ಗಾಂಜಾ ಸಸಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದೆಲ್ಲದವುದರ ತೂಕ ಅಂದಾಜು 25 ಕೆಜಿ ಆಗಲಿದೆ.
ಕಲಬುರ್ಗಿ ನಗರದ ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುವುದನ್ನು ಪೊಲೀಸರು ಈಚೆಗೆ ಪತ್ತೆ ಮಾಡಿದ್ದರು. ಈಗ ಹೇರೂರದಲ್ಲಿ ದಾಳಿ ನಡೆಸಿ ಗಾಂಜಾ ಬೆಳೆಯನ್ನೇ ವಶಪಡಿಸಿಕೊಳ್ಳಲಾಗಿದೆ. ಇಂತಹ ಅಕ್ರಮ ದಂಧೆಗಳನ್ನು ಬೇರು ಕಿತ್ತುಹಾಕಲು ಆಯುಕ್ತಾಲಯ ಸಿಬ್ಬಂದಿ ಇನ್ನಿಲ್ಲದ ಶ್ರಮ ಹಾಕುತ್ತಿದ್ದಾರೆ ಎಂದು ಕಮಿಷನರ್ ಎನ್.ಸತೀಶಕುಮಾರ ತಿಳಿಸಿದ್ದಾರೆ.