ಕಲಬುರ್ಗಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಶಾಂತಪ್ಪ ಕೂಡಲಗಿ ಅವರ ತಮ್ಮ ಹಣಮಂತ ಚಂದ್ರಶಾ ಕೂಡಲಗಿ (40) ಅವರನ್ನು ದುಷ್ಕರ್ಮಿಗಳು ಮಂಗಳವಾರ ಸಂಜೆ ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮದ ಬಳಿ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹಣಮಂತ ಹಾಗೂ ಆತನ ಅಣ್ಣ ಶಾಂತಪ್ಪ ಮಯೂರ ಗ್ರಾಮದ ಬಿಜೆಪಿ ಮುಖಂಡ ಶಿವಲಿಂಗ ಭಾವಿಕಟ್ಟಿ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ 2019ರ ನವೆಂಬರ್ನಲ್ಲಿ ಬಂಧನಕ್ಕೊಳಗಾಗಿದ್ದರು. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಲಿಂಗ ಅವರನ್ನು ಕೊಲೆ ಮಾಡಿದ್ದ ಸಹೋದರರ ವಿಚಾರಣೆ ಇನ್ನೂ ನಡೆಯುತ್ತಿತ್ತು.
ಕಲಬುರ್ಗಿಯಿಂದ ಇನ್ನೋವಾ ಕಾರಿನಲ್ಲಿ ಬಳ್ಳುಂಡಗಿಯತ್ತ ತೆರಳುತ್ತಿದ್ದ ಹಣಮಂತ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದಾಗಿ ತಲೆಯ ಭಾಗ ಛಿದ್ರವಾಗಿದೆ. ಕಾರಿನ ಗಾಜುಗಳು ಒಡೆದಿವೆ.
ಸ್ಥಳಕ್ಕೆ ಡಿವೈಎಸ್ಪಿ ತಾಯಪ್ಪ ದೊಡ್ಡಮನಿ, ಜೇವರ್ಗಿ ಸಿಪಿಐ ಶಿವಪ್ರಸಾದ್, ನೆಲೋಗಿ ಪಿಎಸ್ಐ ರಾಜಕುಮಾರ ಜಮಗೊಂಡ ಭೇಟಿ ನೀಡಿದರು.