ಆಳಂದ: ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಬಿ. ಸತ್ಯನಾರಾಯಣ ಸೋಮವಾರ ಅಧಿಕಾರ ಸ್ವೀಕರಿಸಿದರು.
ಪ್ರಭಾರಿ ವಹಿಸಿಕೊಂಡಿದ್ದ ಪ್ರೊ.ಎಂ.ವಿ.ಅಳಗವಾಡಿ ಅವರು ಸತ್ಯನಾರಾಯಣ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ, ಕುಲಸಚಿವ ಪ್ರೊ.ಬಸವರಾಜ ಡೋಣೂರ ಇದ್ದರು.
‘ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವನ್ನು ವಿಶ್ವಮಟ್ಟದ ಶೈಕ್ಷಣಿಕ ಕೇಂದ್ರವಾಗಿ ನಿರ್ಮಿಸುವ ಗುರಿ ಹೊಂದಿದ್ದೇನೆ. ಇದು ಸಾಕಾರಗೊಳ್ಳಲು ನಾವೆಲ್ಲ ಒಂದು ತಂಡವಾಗಿ ಶ್ರಮಿಸಬೇಕಿದೆ. ಈ ಕ್ಯಾಂಪಸ್ ಮೂಲಕ ರಾಷ್ಟ್ರದ ಬೆಳವಣಿಗೆಗೆ ಅಗತ್ಯವಾದ ಮಾನವ ಸಂಪನ್ಮೂಲ ಸೃಷ್ಟಿಸುವುದು ನಮ್ಮ ಜವಾಬ್ದಾರಿ’ ಎಂದು ಸತ್ಯನಾರಾಯಣ ಹೇಳಿದರು.
‘ವಿಶ್ವವಿದ್ಯಾಲಯಗಳು ಬೌದ್ಧಿಕ ಸಂಪತ್ತು ಹೊಂದಿದ ಕೇಂದ್ರಗಳು, ಸಂಶೋಧನಾ ನೆಲೆಗಳು ಎಂಬ ಕಾರಣಕ್ಕೆ ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತವೆ. ಅದನ್ನು ನಾವು ಬಹಳ ಜಾಗರೂಕತೆಯಿಂದ ಖರ್ಚು ಮಾಡಬೇಕು. ಏಕೆಂದರೆ ಅದು ಜನರು ತೆರಿಗೆಯಿಂದ ನಮಗೆ ಬಂದಿರುವ ಹಣ’ ಎಂದೂ ಅರವು ಹೇಳಿದರು.
ಪ್ರೊ.ಎಂ.ವಿ. ಅಳಗವಾಡಿ ಮಾತನಾಡಿ, ‘ನೂತನ ಕುಲಪತಿ ಅಪಾರ ಅನುಭವ ಹಾಗೂ ಸಮರ್ಥ ಮಾರ್ಗದರ್ಶನವು ವಿಶ್ವವಿದ್ಯಾಲ ಯವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ‘ ಎಂದು ಆಶಯ ವ್ಯಕ್ತಪಡಿಸಿದರು.