ಕಲಬುರಗಿ: ಕೆಲವು ಠಾಣೆಗಳ ಪೊಲೀಸ್ ಅಧಿಕಾರಿಗಳು ಗೋ ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸೇನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ಕಾಯ್ದೆಯಡಿ ಬಡ ರೈತರು, ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಜಾನುವಾರಗಳನ್ನು ವಶಪಡಿಸಿ ಕೊಂಡು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಸಹ ಸಂಘ ಪರಿವಾರದ ಆದೇಶದಂತೆ ವರ್ತಿಸುತ್ತಿದೆ. ಈ ಮೂಲಕ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಎಸ್ಸಿ, ರೈತರು ಮತ್ತು ಅಲ್ಪಸಂಖ್ಯಾತರ ಮೇಲೆ ದ್ವೇಷಪೂರಿತ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಸಿ.ಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ವಿಫಲವಾಗಿದೆ. ಸರ್ಕಾರದ ವಿಭಾಗದ ನೀತಿಯನ್ನು ದಲಿತ ಸೇನೆ ವಿರೋಧಿಸುತ್ತದೆ ಎಂದರು.
ಜಾನುವಾರುಗಳ ವಶದಿಂದಾಗಿ ಕೃಷಿಕರ ಬೇಸಾಯ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದು ರೈತರನ್ನು ಚಿಂತೆಗೆ ದೂಡಿದೆ. ಕೃಷಿಕರಲ್ಲಿನ ಆತಂಕ ದೂರಮಾಡಿ, ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಜಿ. ಯಳಸಂಗಿ, ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ, ಪೌರಕಾರ್ಮಿಕ ಘಟಕದ ಅಧ್ಯಕ್ಷಹುಸೇನಿ ತಳಕೇರಿ, ಉಪಾಧ್ಯಕ್ಷ ಶ್ರೀಕಾಂತ ರೆಡ್ಡಿ, ಮುಖಂಡರಾದ ಗುರು ಎಸ್ ಮಾಳಗೆ, ಅಸ್ಫಾಕ್ ಹುಸೇನ್, ರಾಜು ಎಸ್ ಲೇಂಗಟಿ, ಮೋಹನ್ ಚಿನ್ನಾ ಇದ್ದರು.