ಕಲಬುರ್ಗಿ: ‘ಈ ಪ್ರಪಂಚದೊಳಗೆ ಏನೆಲ್ಲವನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ತನ್ನ ತಾನು ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣ’ ಎಂದು ವೀರಮ್ಮ ಗಂಗಸಿರಿ ಮಹಿಳಾ ವಿದ್ಯಾಲಯದ ಪ್ರಾಂಶುಪಾಲ ಡಾ.ಈಶ್ವರಯ್ಯ ಮಠ ಹೇಳಿದರು.
ನಗರದ ಬಸವ ಸಮಿತಿ ಅನುಭವ ಮಂಟಪದಲ್ಲಿ ಲಿಂ. ವಿಶ್ವನಾಥರೆಡ್ಡಿ ಮುದ್ನಾಳ, ಲಕ್ಷ್ಮಮ್ಮ ಹಾಗೂ ರಾಚನಗೌಡ ಮುದ್ನಾಳ ಸ್ಮರಣಾರ್ಥ ಈಚೆಗೆ ಆಯೋಜಿಸಿದ್ದ ‘ನಿಮ್ಮಲ್ಲಿ ನೀವು ತಿಳಿದು ನೋಡಿರೆ’ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತನ್ನ ತಾ ಅರಿಯದೇ ಹೋದರೆ ಅದೇ ಪ್ರಳಯವಲ್ಲ ಎಂದು ಅಲ್ಲಮಪ್ರಭು ಹೇಳುತ್ತಾರೆ. ನಮ್ಮ ದೇಶದಲ್ಲಿ ಎಲ್ಲರ ಮನಸ್ಸನ್ನು ಕಾಡಿದ್ದು ದೇವರು. ದೇವರನ್ನು ಅರಿಯುವ ಸಂದರ್ಭದಲ್ಲಿ ಬಸವಾದಿ ಶಿವಶರಣರು ದೇವರು ಅನ್ನೋದು ಗುಡಿಯೊಳಗೋ, ತೀರ್ಥ ಕ್ಷೇತ್ರದೊಳಗೋ ಮತ್ತೆ ಬೇರೆ ಹೊರಗಡೆ ಎಲ್ಲಿಯೂ ಇಲ್ಲ. ದೇವರು ಅನ್ನೋದು ತಾನೇನೇ. ತನ್ನ ಬಿಟ್ಟು ಒಡವೆ ಇಲ್ಲ. ಮಣ್ಣು ಬಿಟ್ಟು ಮಡಕೆಯಿಲ್ಲ. ತನ್ನ ಬಿಟ್ಟು ದೇವರಿಲ್ಲ. ತನ್ನ ತಾ ತಿಳಿದರೆ ತಾನೇ ದೇವರು ಎಂದು ತಮ್ಮ ವಚನಗಳಲ್ಲಿ ಉಲ್ಲೇಖಿಸುತ್ತಾರೆ’ ಎಂದು ತಿಳಿಸಿದರು.
ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ ಮಾತನಾಡಿ, ‘ಬಸವ ಸಮಿತಿಯಲ್ಲಿ ದತ್ತಿಯ ಹೆಸರಿನಲ್ಲಿರುವ ಅನೇಕರು ಅನುಪಮಚರಿತ ವ್ಯಕ್ತಿಗಳು. ಅವರ ಬಗ್ಗೆ ಅನುಭಾವ ನೀಡುವಷ್ಟು ಉನ್ನತ ವ್ಯಕ್ತಿತ್ವದ ಮಹಾನುಭಾವರು ಇದ್ದಾರೆ. ಅಂತಹವರ ಸಾಲಿಗೆ ವಿಶ್ವನಾಥರೆಡ್ಡಿ ಮುದ್ನಾಳ ಕೂಡ ಸೇರುತ್ತಾರೆ’ ಎಂದರು.
ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ದತ್ತಿ ದಾಸೋಹಿಗಳಾದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಹನುಮಂತರೆಡ್ಡಿ ಮುದ್ನಾಳ ಇದ್ದರು.
ಪ್ರಧಾನ ಕಾರ್ಯದರ್ಶಿ ಎಚ್.ಕೆ.ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.