ದಾಂತೆವಾಡ: ನಕ್ಸಲರು ಹುದುಗಿಟ್ಟಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಆರು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟ ದುರ್ಘಟನೆ ಛತ್ತೀಸ್ಗಡದ ಚೋಲನಾರ್ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಮೂವರು ಛತ್ತೀಸ್ಗಡ ಸಶಸ್ತ್ರ ಪಡೆಯ ಹಾಗೂ ಇಬ್ಬರು ಜಿಲ್ಲಾ ಪಡೆಯ ಸಿಬ್ಬಂದಿ ಆಗಿದ್ದಾರೆ. ಇನ್ನೊಬ್ಬರ ಕುರಿತಾದ ವಿವರ ಇನ್ನೂ ಲಭ್ಯವಾಗಿಲ್ಲ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಚೊಲನಾರ್ ಸಮೀಪದ ರಸ್ತೆ ಕಾಮಗಾರಿ ನಡೆಯುತ್ತಿರುವ ಪ್ರದೇಶವೊಂದಕ್ಕೆ ಸಿಬ್ಬಂದಿ ಜೀಪಿನಲ್ಲಿ ತೆರಳುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ.
ಶೋಧ ಕಾರ್ಯ ಪ್ರಗತಿಯಲ್ಲಿ: ನಕ್ಸಲರಿಗಾಗಿಶೋಧ ಕಾರ್ಯ ಪ್ರಗತಿಯಲ್ಲಿದೆ. ಸ್ಫೋಟ ಪ್ರಬಲ ತೀವ್ರತೆಯಿಂದ ಕೂಡಿದ್ದಿರಬಹುದು. ಆದರೆ, ಖಚಿತ ಮಾಹಿತಿ ತನಿಖೆಯ ನಂತರವಷ್ಟೇ ತಿಳಿದುಬರಲಿದೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ವಿಭಾಗದ ಡಿಐಜಿ ಸುಂದರ್ ರಾಜ್ ತಿಳಿಸಿದ್ದಾರೆ.