ಆಳಂದ: ತಾಲ್ಲೂಕಿನ ಅಲ್ಲಾಪುರ ಗ್ರಾಮದಲ್ಲಿ ಶನಿವಾರ ನಡೆದ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಸ್ಥಳದಲ್ಲಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ ಪಡಿಸಿದರು.
ಅಲ್ಲಾಪುರದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ ಎಂದು ಸಭೆಯಲ್ಲಿ ಮಹಿಳೆಯರು ಗಮನ ಸೆಳೆದರು. ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಜತೆ ಮಾತನಾಡಿ ಬೇಸಿಗೆ ಮುಗಿಯುವರೆಗೂ ಝಳಕಿ ಗ್ರಾಮದ ಬಾವಿಯಿಂದ ನೀರು ಸರಬುರಾಜು ಕೈಗೊಳ್ಳಲು ಸೂಚಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಸರ್ಕಾರ ರಾಷ್ಟ್ರೀಯ ಭದ್ರತಾ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಸಿದೆ. ದಲ್ಲಾಳಿಗಳ ಸಹಾಯ ಪಡೆಯದೇ ನೇರವಾಗಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉಪ ತಹಶೀಲ್ದಾರ್ ದಯಾನಂದ, ಕಂದಾಯ ನಿರೀಕ್ಷಕ ರಾಜಕುಮಾರ ಸರಂಸಬಿ, ಗ್ರಾ.ಪಂ ಅಧ್ಯಕ್ಷ ದತ್ತಪ್ಪ ಪೂಜಾರಿ, ಉಪಾಧ್ಯಕ್ಷ ಭೀಮಾಶಂಕರ ಕದಂ, ಗ್ರಾಮ ಲೆಕ್ಕಾಧಿಕಾರಿ ಭೀಮಾಶಂಕರ, ಪಿಡಿಒ ಚಿದಾನಂದ ಆಲೇಗಾಂವ, ರಾಜುಕುಮಾರ ಮುಲಗೆ, ಶ್ರೀಮಂತ ಜುಲ್ಪೆ, ಶ್ರೀಮಂತ ನಾಗೂರೆ , ಪರಮೇಶ್ವರ ಬನಸೋಡೆ ಇದ್ದರು.
ಇದೇ ಸಂದರ್ಭದಲ್ಲಿ ವಿಧವಾ ವೇತನ, ಸಂಧ್ಯಾಸುರಕ್ಷಾ, ಅಂಗವಿಕಲ ವೇತನದ ಮಾಶಾಸನ ಸೇರಿದಂತೆ 36 ಜನರ ಸ್ಥಳದಲ್ಲಿಯೇ ಆದೇಶಪ್ರತಿ ವಿತರಣೆ ಮಾಡಲಾಯಿತು. ಅಲ್ಲದೆ ಅರ್ಹ ಫಲಾನುಭವಿಗಳ ಪಡಿತರ ಚೀಟಿಗೆ ಹೆಸರು ಹೆಸರು ಸೇರ್ಪಡೆ, ರಾಷ್ಟ್ರೀಯ ಭದ್ರತಾ ಯೋಜನೆಯಡಿ ಶವಸಂಸ್ಕಾರ ಪರಿಹಾರ ಹಣ ವಿತರಣೆ ಮಾಡಲಾಯಿತು.