ಅಫಜಲಪುರ: ‘ಬೇಸಿಗೆ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರು ಕೆಲಸಕ್ಕಾಗಿ ನಗರಗಳತ್ತ ಗುಳೆ (ವಲಸೆ) ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ದುಡಿಯೋಣ ಬಾ ಅಭಿಯಾನ ಯೋಜನೆ ಆರಂಭಿಸಿದ್ದು, ಕೂಲಿ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ ತಿಳಿಸಿದರು.
ತಾಲ್ಲೂಕಿನ ಭೈರಾಮಡಗಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನ ರೋಜಗಾರ ದಿನಾಚರಣೆ ಹಾಗೂ ಕೂಲಿ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಮಾಡಿಸಿಕೊಂಡು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಈ ವಿಶೇಷ ಅಭಿಯಾನದಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಕೆರೆ ಹೂಳೆತ್ತುವುದು, ನಾಲಾ ಹೂಳೆತ್ತುವುದು, ಬಚ್ಚಲ ಗುಂಡಿ, ಕೃಷಿ ಅರಣ್ಯೀಕರಣ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಾಸಿಂ ಮಣ್ಣೂರ, ತಾಂತ್ರಿಕ ಸಹಾಯಕ ಅಮಿರುದ್ದೀನ , ತಾಲ್ಲೂಕು ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ , ಟಿ,ಎಮ್ ಐ ಎಸ್ ಮಹೇಶ , ತಾಂತ್ರಿಕ ಸಹಾಯಕಿ ಮಾಲಾಶ್ರೀ, ಗ್ರಾ.ಪಂ ಸಿಬ್ಬಂದಿ ಹಾಗೂ ಗ್ರಾಮ ಕಾಯಕ ಮಿತ್ರ ಮತ್ತಿತರಿದ್ದರು.