ಕಲಬುರ್ಗಿ: ‘ಸರ್ ಎಂ.ವಿಶ್ವೇಶ್ವರಯ್ಯ ಅವರ ಕಾಯಕ ನಿಷ್ಠೆ, ಪ್ರಾಮಾಣಿಕತೆ, ನಿಷಪಕ್ಷಪಾತ ಹಾಗೂ ದೂರದೃಷ್ಟಿ ಗುಣಗಳು ಇಂದಿನ ಯುವ ಎಂಜಿನಿಯರ್ಗಳಿಗೆ ದಾರಿದೀಪ’ ಎಂದು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಹೇಳಿದರು.
ಇಲ್ಲಿನ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್, ಕಲಬುರ್ಗಿ ಸ್ಥಾನಿಕ ಕೇಂದ್ರದಿಂದ ವಿಶ್ವೇಶ್ವರಯ್ಯ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 54ನೇ ಎಂಜಿನಿಯರ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
‘ಯುವ ಎಂಜಿನೀಯರ್ಗಳು ವಿಶ್ವೇಶ್ವರಯ್ಯ ಅವರ ಗುಣಗಳನ್ನು ಪಾಲಿಸಿದರೆ ದೇಶ ಪ್ರಗತಿಯಾಗುವಲ್ಲಿ ಸಂದೇಹವೇ ಇಲ್ಲ. ಕೋವಿಡ್ನಂಥ ಸಾಂಕ್ರಾಮಿಕ ನಿಯಂತ್ರಣದಲ್ಲಿ ವೈದ್ಯಕೀಯ ಕ್ಷೇತ್ರದಷ್ಟೇ ಎಂಜಿನಿಯರಿಂಗ್ ಕ್ಷೇತ್ರವೂ ಮುಖ್ಯ ಪಾತ್ರ ವಹಿಸಿತು. ಎಂಜಿನಿಯರ್ಗಳು ಶೀಘ್ರದಲ್ಲಿ ಹೊಸ ಹೊಸ ಯಂತ್ರಗಳನ್ನು ಸಂಶೋಧನೆ ಮಾಡಿ ಕೋವಿಡ್–19 ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಾನು ಕೂಡ ಎಂಜಿನಿರ್ ಆಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಗುತ್ತದೆ’ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕೆ.ಬಿ.ಎನ್. ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ವಿಶಾಲ ದತ್ತು ಕೊಹಿರ ಮಾತನಾಡಿ, ‘ಕೋವಿಡ್-19 ನಂತಹ ಪರಿಸ್ಥಿತಿಯಲ್ಲಿ ಎಂಜಿನಿಯರಿಂಗ್ ಕ್ಷೇತ್ರ ಅವಶ್ಯಕತೆ ಹಾಗೂ ಕೌಶಲ ಎಷ್ಟು ಮುಖ್ಯ ಎಂಬುದನನ್ನು ನಮ್ಮ ಯುವ ಎಂಜಿನಿಯರ್ಗಳು ಸಮಾಜಕ್ಕೆ ತೋರಿಸಿದ್ದಾರೆ. ಸಂಕಷ್ಟ ಕಾಲದಲ್ಲಿ ಜನತೆಗೆ ನೆರವಾಗಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಪ್ರೊ.ಬಿ.ಎಸ್. ಮೋರೆ ಮಾತನಾಡಿದರು. ಭಾರತಿ ಹರಸೂರ ಶಿವಶಂಕ್ರಪ್ಪಾ ಗುರಗುಂಟೆ, ಕಾಶಿನಾಥ ಬೀದರಕರ, ಡಾ.ಶಶಿಕಾಂತ ಮೀಸೆ, ಸುವರ್ಣಾ ಮೀಸೆ, ಡಾ.ವೀರೇಶ ಮಲ್ಲಾಪೂರ, ಚಂದ್ರಶೇಖರ ಕಕ್ಕೇರಿ ಸೇರಿ ಅನೇಕರು ಇದ್ದರು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಲೋಕೋಪಯೋಗಿ ಇಲಾಖೆಯನಿವೃತ್ತ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್.ಎನ್. ಪುಣ್ಯಶೆಟ್ಟಿ, ಜೆಸ್ಕಾಂ ಸೂಪರಿಡೆಂಟ್ ಎಂಜಿನಿಯರ್ ಸಿದ್ರಾಮ ಪಾಟೀಲ, ಯಾದಗಿರ ಪ್ರಥಮ ದರ್ಜೆ ಗುತ್ತಿಗೆದಾರ ಭೀಮನಗೌಡ ಕ್ಯಾತನಾಳ, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿಮಹಾದೇವಿ ಬಿರಾದಾರ, ಅಫಜಲಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯಪ್ರೊ.ಮಲ್ಲಿಕಾರ್ಜುನಪ್ಪ ಶಾವಿ ಅವರನ್ನು ಸನ್ಮಾನಿಸಲಾಯಿತು. ಹನುಮಯ್ಯ ಬೇಲೂರೆ ಸ್ವಾಗತಿಸಿದರು. ಸುಭಾಷ ಸೂಗೂರ ವಂದಿಸಿದರು.