ಬೆಳಗಾವಿ: ರಾಜ್ಯ ಸರ್ಕಾರ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡೆಸಿದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಂಇಎಸ್ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ ಮತ್ತು ಐವರು ಪಾಲಿಕೆ ಸದಸ್ಯರಿಗೆ ನಗರಾಭಿವೃದ್ಧಿ ಇಲಾಖೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಪಾಲಿಕೆ ಸದಸ್ಯರಾದ ಸಂಜೋತಾ ಬಾಂದೇಕರ (ಅಂದಿನ ಮೇಯರ್), ಸರಿತಾ ಪಾಟೀಲ, ಪಂಡರಿ ಪರಬ್, ಜ್ಯೋತಿ ಚೋಪಡೆ, ಕಿರಣ ಸಾಯಿನಾಕ ಹಾಗೂ ಮೋಹನ ಬೆಳಗುಂದಕರ ಅವರಿಗೆ ನೋಟಿಸ್ ನೀಡಲಾಗಿದೆ.
ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿರುವುದು ರಾಜ್ಯ ವಿರೋಧಿ ನಡವಳಿಕೆಯಾಗಿದ್ದು, ಸದಸ್ಯತ್ವ ಏಕೆ ರದ್ದು ಮಾಡಬಾರದು ಎಂಬುದಕ್ಕೆ 15 ದಿನಗಳ ಒಳಗೆ ಉತ್ತರಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.
2016ರಲ್ಲೂ ಎಂಇಎಸ್ ಬೆಂಬಲಿತ ಪಾಲಿಕೆ ಸದಸ್ಯರು ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಆಗಲೂ ಕಾರಣ ಕೇಳಿ ನೋಟಿಸ್ ಜಾರಿ ನೀಡಲಾಗಿತ್ತು.