ಚಿಂಚೋಳಿ: ತಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ನಾಲ್ಕು ತಲೆಮಾರಿನವರು ಇರುವ ಅವಿಭಕ್ತ ಕುಟುಂಬವೊಂದಿದೆ.
ಇಲ್ಲಿನ ಚಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗವು ನಡೆಸಿದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಈ ಕುಟುಂಬ ಪತ್ತೆಯಾಗಿದೆ. ಕುಟುಂಬದ ಯಜಮಾನ ಶಿವರಾಯ ಜ್ಯೋತಿ ಅವರಿಗೆ 82 ವರ್ಷ. ಅವರ ಪತ್ನಿ ಮರೆಮ್ಮ ಅವರಿಗರ 72 ವರ್ಷ.
ಈ ದಂಪತಿಗೆ ಮೂವರು ಹೆಣ್ಣು, ಏಳು ಗಂಡು ಮಕ್ಕಳು ಇದ್ದಾರೆ. ಒಬ್ಬಳು ಮಗಳು ಚಂದಮ್ಮ ಮತ್ತು ಎಲ್ಲ ಏಳು ಗಂಡು ಮಕ್ಕಳು ಒಟ್ಟಿಗೆ ಇದ್ದಾರೆ. ಈ ಕುಟುಂಬದಲ್ಲಿ ಸದ್ಯ 56 ಮಂದಿ ಇದ್ದಾರೆ. ಒಟ್ಟು 23 ಹೆಣ್ಣು ಮಕ್ಕಳು ಇಲ್ಲಿದ್ದಾರೆ.
ಒಂದೇ ಕಡೆ ಅಡುಗೆ ಮಾಡುವುದು ಮತ್ತು ಒಂದೇ ಕಡೆ ಊಟ ಮಾಡುವುದು ಈ ಕುಟುಂಬದ ವಿಶೇಷತೆಗಳಲ್ಲೊಂದಾಗಿದೆ. 3.03 ಗುಂಟೆ ಜಮೀನು ಪಿತ್ರಾರ್ಜಿವಾಗಿ ಬಂದಿದ್ದು ಶಿವರಾಯ ಜ್ಯೋತಿ ಅವರು ತಮ್ಮ ಹಾಗೂ ಮಕ್ಕಳ ದುಡಿಮೆಯಿಂದ 25 ಎಕರೆ ಜಮೀನು ಖರೀದಿಸಿದ್ದಾರೆ.
ಈ ಕುಟುಂಬದ ಮುಖ್ಯ ಉದ್ಯೋಗ ಒಕ್ಕಲುತನ. ಈ ಕುಟುಂಬದ ಇಬ್ಬರು ಗ್ರಾಮ ಪಂಚಾಯಿತಿಯಲ್ಲಿ ಮತ್ತು ಒಬ್ಬರು ಆರೋಗ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಟುಂಬದ ಅಗತ್ಯಗಳನ್ನು ಪೂರೈಸಲು ಎಲ್ಲರಿಗೂ ಒಟ್ಟಿಗೆ ಖರೀದಿಸಲಾಗುತ್ತದೆ. ಬಟ್ಟೆಬರೆ ಹಾಗೂ ಚಪ್ಪಲಿ ಎಲ್ಲವೂ ಒಮ್ಮೆಗೆ ತಂದು ನೀಡಲಾಗುತ್ತದೆ. ಈ ಕುಟುಂಬ ಪರಸ್ಪರ ವಿಶ್ವಾಸ ಮತ್ತು ನಂಬಿಕೆಯಿಂದ ಒಟ್ಟಾಗಿ ಸಾಗುತ್ತಿದೆ.‘ನಮ್ಮ ಕುಟುಂಬದವರಿಗೆ ದುಡಿಮೆಯಲ್ಲಿ ನಂಬಿಕೆ. ಒಟ್ಟಾಗಿ ದುಡಿದು ಸುಖ ಸಂಸಾರ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಶಿವರಾಯ ಜ್ಯೋತಿ.