ಕಲಬುರ್ಗಿ: ‘ನಾಡಿಗೆ ಅನ್ನ ನೀಡುವ ರೈತ ಜನರ ಪಾಲಿನ ನಿಜವಾದ ದೇವರು’ ಎಂದು ಕಾರ್ಮಿಕ ಹೋರಾಟಗಾರ ಎಸ್.ಕೆ.ಕಾಂತಾ ಹೇಳಿದರು.
ನಗರದ ಗುರುಪಾದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶಿವಸಂಗ ಸಾಂಸ್ಕೃತಿಕ ಸೇವಾ ಸಂಘವು ವಿಶ್ವ ರೈತ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೈತ ಇಂದು ಸಂಕಷ್ಟದಲ್ಲಿದ್ದಾನೆ. ಅನೇಕ ಕಾರ್ಖಾನೆ ಮತ್ತು ಕಂಪನಿಗಳಿಗೆ ರಿಯಾಯಿತಿ ನೀಡುವ ಸರ್ಕಾರ ಅನ್ನ ಕೊಡುವ ರೈತರಿಗೆ ಏಕೆ ರಿಯಾಯಿತಿ ನೀಡಬಾರದು’ ಎಂದು ಪ್ರಶ್ನಿಸಿದರು.
ಸಂಘದ ಅಧ್ಯಕ್ಷ ಪರಮೇಶ್ವರ ಶಟಕಾರ ಮಾತನಾಡಿ, ‘ನಾವು ಪಡೆದಿರುವ ಶಿಕ್ಷಣ ನಮ್ಮನ್ನು ಸಾಕುತ್ತಿದೆ. ರೈತ ಎಲ್ಲರನ್ನೂ ಸಾಕುತ್ತಾನೆ. ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಇಳುವರಿ ಪ್ರಮಾಣ ಹೆಚ್ಚಿಸಬೇಕು’ ಎಂದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ದೇಶಕ್ಕೆ ಅನ್ನ ನೀಡುವ ರೈತನ ಋಣ ಎಂದಿಗೂ ತೀರಿಸಲಾಗದು. ಯಾರಿಗೂ ಬೇಡದ, ಬರೀ ನೀಡುವ ಕೈ ಎಂದರೆ ಅದು ರೈತನೊಬ್ಬನೇ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.
ಸಾಧಕರಾದ ಶರಣಬಸಪ್ಪ ಪಾಟೀಲ, ಗುಂಡೇರಾವ ಧೂಳಗುಂಡ, ಭಾರತೀಬಾಯಿ ಎ.ಜೀವಣಗಿ, ಡಾ. ನಾಗರಾಜ ಹೆಬ್ಬಾಳ ಅವರನ್ನು ಸನ್ಮಾನಿಸಲಾಯಿತು.
ಗುರುಪಾದೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಂ.ಬಿ.ಅಂಬಲಗಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ, ಶ್ರೀಕಾಂತ ಪಾಟೀಲ ತಿಳಗೂಳ, ಡಾ. ಸಂಜುಕುಮಾರ ಶಟಕಾರ, ಶಿವರಾಜ ಅಂಡಗಿ, ಜಗದೀಶ ಮರಪಳ್ಳಿ ಇದ್ದರು.