ಜೇವರ್ಗಿ: ಸಾಲದ ಬಾಧೆಯಿಂದ ಮನನೊಂದು ತಾಲ್ಲೂಕಿನ ಚನ್ನೂರ ಗ್ರಾಮದ ರೈತ ಶಿವಾನಂದ ಮಲ್ಲಿಕಾರ್ಜುನ ಚಿಕ್ಕಗೌಡರ (35) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಾನಂದ ಕುಟುಂಬಕ್ಕೆ 7 ಎಕರೆ ಜಮೀನಿದ್ದು, ಜಮೀನಿನ ಮೇಲೆ ಭಾರತೀಯ ಸ್ಟೇಟ್ ಬ್ಯಾಂಕ್ ಜೇವರ್ಗಿ ಶಾಖೆಯಲ್ಲಿ ಕೃಷಿಗಾಗಿ ₹ 3 ಲಕ್ಷ ಸಾಲ ಪಡೆದಿದ್ದರು. ಅಲ್ಲದೇ ಖಾಸಗಿಯಾಗಿ ₹ 17 ಲಕ್ಷ ಸಾಲ ಮಾಡಿದ್ದರು ಎಂದು ಶಿವಾನಂದ ಪತ್ನಿ ಭಾಗಮ್ಮ ಜೇವರ್ಗಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಜಮೀನಿಗೆ ತೆರಳಿ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ವರ್ಗದವರು ಸಂಬಂಧಿಕರ ಊರುಗಳಿಗೆ ತೆರಳಿ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಸುಳಿವು ದೊರೆತಿರಲಿಲ್ಲ.ಗುರುವಾರ ಬೆಳಿಗ್ಗೆ ಮೃತನ ಸಹೋದರ ಹೊಲಕ್ಕೆ ತೆರಳಿದಾಗ ಶಿವಾನಂದ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಜೇವರ್ಗಿ ಠಾಣೆ ಎಎಸ್ಐ ಶಿವಶರಣಪ್ಪ ಪಡಶೆಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಬೈಕ್ ಸವಾರ ಸಾವು ಆಳಂದ: ತಾಲ್ಲೂಕಿನ ಝಳಕಿ (ಕೆ) ಗ್ರಾಮಕ್ಕೆ ತೆರಳುತ್ತಿದ್ದ ಎತ್ತಿನಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಬೈಕ್ ಸವಾರ ಪಂಡಿತ ಬಾಸಗಿ (23) ಮೃತಪಟ್ಟವರು. ಬೈಕ್ ಮೇಲೆ ಕುಳಿತಿದ್ದ ಶ್ರೀಶೈಲ ಹಿಪ್ಪರಗಿ ಅವರಿಗೆ ಗಾಯಗಳಾಗಿದ್ದು, ಕಲಬುರ್ಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.