ಕಾಳಗಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ರಟಕಲ್ ಗ್ರಾಮದ ಬಸ್ ನಿಲ್ದಾಣ ಬಳಿಯ ಸಂಗಣ್ಣ ಬಳವಡಗಿ ಎಂಬುವವರ ಹೋಟೆಲಿನಲ್ಲಿ ಶನಿವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ₹ 4 ಲಕ್ಷದಷ್ಟು ವಸ್ತುಗಳು ಕರಕಲಾಗಿವೆ.
ಅಡುಗೆ ಅನಿಲದ ಸ್ಟೌ ಮೇಲೆ ಅನ್ನ ಮಾಡುತ್ತಿದ್ದಾಗ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ನಾಲ್ಕು ತಾಸು ಉರಿಯಿತು. ಆಗ ಮಾಲೀಕರು ಹೋಟೆಲಿನಲ್ಲಿಯೇ ವಾಸವಾಗಿದ್ದರು ಯಾರಿಗೂ ಅಪಾಯವಾಗಿಲ್ಲ.
ನಗದು ಮತ್ತು ಚಿನ್ನ, ಬಟ್ಟೆ, ಪಾತ್ರೆ ಸೇರಿ ಹಲವು ವಸ್ತುಗಳು ಭಸ್ಮವಾಗಿವೆ.
ರಾತ್ರಿ 10ರ ಸುಮಾರಿಗೆ ಹೊತ್ತಿಕೊಂಡ ಬೆಂಕಿ ತಡರಾತ್ರಿ 2ರವರೆಗೂ ಧಗಧಗಿಸಿತು. 11ರ ಹೊತ್ತಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರೊಳಗೆ ಹೋಟೆಲ್ ಪೂರ್ಣ ಸುಟ್ಟಿತ್ತು ಎಂದು ಚಿಂಚೋಳಿ ಅಗ್ನಿ ಶಾಮಕ ಠಾಣೆ ಅಧಿಕಾರಿ ಸೂರ್ಯಕಾಂತ ಬಿರಾದಾರ ತಿಳಿಸಿದರು.
ಸಂಸದ ಡಾ.ಉಮೇಶ ಜಾಧವ ಶನಿವಾರ ತಡರಾತ್ರಿಯೇ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು.