ವಾಡಿ (ಕಲಬುರಗಿ ಜಿಲ್ಲೆ): ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ಸೋಮವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.
ಸಿಮೆಂಟ್ ಕ್ಲಿಂಕರ್ ಸಾಗಿಸುವ ಬೆಲ್ಟ್ಗೆ ಬೆಂಕಿ ಹತ್ತಿದ ಪರಿಣಾಮ ದಟ್ಟ ಹೊಗೆ ಆವರಿಸಿತು.
ಕಲ್ಲು, ಮ್ಯಾಂಗನೀಸ್ ಮಣ್ಣು, ಜಿಪ್ಸಂ, ಕಲ್ಲಿದ್ದಲು, ನೀರು ಮಿಶ್ರಣ ಮಾಡಿ ಸಿಮೆಂಟ್ ಉತ್ಪಾದನಾ ಘಟಕಕ್ಕೆ ಈ ಬೆಲ್ಟ್ ಮೂಲಕ ಸಾಗಿಸಲಾಗುತ್ತದೆ. ಹೀಗೆ ಸಾಗಿಸುವ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.
ಏಕಾಏಕಿ ಚಿಮ್ಮಿದ ದಟ್ಟ ಹೊಗೆಯಿಂದ ಪಟ್ಟಣ ಹಾಗೂ ಸುತ್ತಲಿನ ಇಂಗಳಗಿ, ಬಲರಾಮ ಚೌಕ್ ರಾವೂರು ಲಕ್ಷ್ಮಿಪುರ ವಾಡಿ ಕುಂದಾಪುರ ಗ್ರಾಮದ ಜನ ಆತಂಕಕ್ಕೆ ಒಳಗಾದರು.
ಎಸಿಸಿ ಕಂಪನಿಯ ಆಡಳಿತ ವರ್ಗ ಹಾಗೂ ಎಂಜಿನಿಯರುಗಳು, ಅವಘಡ ಸಂಭವಿಸಿದ ಸ್ಥಳದತ್ತ ದೌಡಾಯಿಸಿ ಪರಿಶೀಲನೆ ನಡೆಸಿದರು.