ಚಿಂಚೋಳಿ:ತಾಲ್ಲೂಕಿನಲ್ಲಿ ಅ.24ವರೆಗೆ ಮಳೆ ಸುರಿಯುವ ಸಾಧ್ಯತೆಗಳ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರಿಂದ ತಾಲ್ಲೂಕಿನ ಕೆರೆಗಳ ಕೆಳ ಭಾಗದ ಗ್ರಾಮಗಳ ಜನರು ಎಚ್ಚರಿಕೆ ವಹಿಸಬೇಕೆಂದು ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಶರಣಪ್ಪ ಕೇಶ್ವಾರ್ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಹವಾಮಾನ ಇಲಾಖೆಯ ಬೆಂಗಳೂರಿನ ಹವಾಮಾನ ಕೇಂದ್ರವು ಅ.20ರಿಂದ 24ವರೆಗೆ ಕಲಬುರ್ಗಿ, ಬೀದರ್ ಸೇರಿದಂತೆ ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಗರೀಷ್ಠ 65 ಮಿ.ಮೀ ಮಳೆ ಬರುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ. ಮಳೆ ಸುರಿದರೆ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಸಣ್ಣ ನೀರಾವರಿ ಕೆರೆಗಳಿಗೆ ಒಳ ಹರಿವು ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು ರಾತ್ರಿ ಸಮಯದಲ್ಲಿ ಮಳೆ ಸುರಿದರೆ ಗ್ರಾಮಗಳಿಗೂ ನೀರು ನುಗ್ಗಬಹುದಾಗಿದೆ. ಪ್ರಯುಕ್ತ ಜನರು ಎಚ್ಚರಿಕೆ ವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಚಿಕ್ಕಲಿಂಗದಳ್ಳಿ, ಸೋಮಲಿಂಗದಳ್ಳಿ, ಕಲ್ಲೂರು ರೋಡ್, ಯಂಪಳ್ಳಿ, ಸಾಲೇಬೀರನಹಳ್ಳಿ, ಹಸರಗುಂಡಗಿ, ಮುಕರಂಬಾ, ಕಂಚನಾಳ್, ಕೋಡ್ಲಿ, ಚಂದನಕೇರಾ, ಜಿಲವರ್ಷಾ ಮೊದಲಾದ ಗ್ರಾಮಗಳ ಜನರು ಜಾಗ್ರತೆ ವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.