ಆಳಂದ: ನಮ್ಮ ಜಾನಪದ ಕಲೆ, ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಇಂತಹ ಕಲೆಗಳನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಹೆಚ್ಚಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ ಶೇರಿ ತಿಳಿಸಿದರು.
ತಾಲ್ಲೂಕಿನ ಗಡಿಗ್ರಾಮ ತುಗಾಂವ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಕುಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ‘ಜಾನಪದ ಗಡಿನಾಡು ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳ ಬಗಗೆ ನಿರ್ಲಕ್ಷ ಸಲ್ಲದು. ಸೂಕ್ತ ಅವಕಾಶಗಳು ದೊರೆತರೆ ನಮ್ಮ ಶ್ರೀಮಂತ ಜಾನಪದ ಕಲೆ ಹಾಗೂ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಂದಿಗೂ ಹಲವು ಕಲಾವಿದರೂ ಯಾವುದೇ ನೆರವು ಬಯಸದೇ ಆತ್ಮತೃಪ್ತಿಗಾಗಿ ಕಲೆ ಬೆಳೆಸುತ್ತಿದ್ದಾರೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಶ್ರುತಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವೀರಭದ್ರ ಖೂನೆ, ಪ್ರಕಾಶ ಕಟಕೆ, ವೈಶಾಲಿ ಕಾಂಬಳೆ, ಅರುಣ ಯಾದವ, ಪ್ರಕಾಶ ಡೋಲೆ, ಧೂಳಪ್ಪ ದ್ಯಾಮನಕರ್ ಇದ್ದರು. ನಂತರ ಜನಪದ ಕಲಾವಿದರ ತಂಡದಿಂದ ಕಲಾಪ್ರದರ್ಶನ ಜರುಗಿತು.