ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟನೂರು ತಿರುವಿನಲ್ಲಿ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾವು

ಕೋಟನೂರ (ಡಿ) ಬಳಿ ಟ್ಯಾಂಕರ್ ಮತ್ತು ಕಾರ್ ನಡುವೆ ಡಿಕ್ಕಿ
Last Updated 21 ಜುಲೈ 2021, 6:00 IST
ಅಕ್ಷರ ಗಾತ್ರ

ಕಲಬುರ್ಗಿ: ನಗರ ಹೊರವಲಯದ ಕೋಟನೂರು (ಡಿ) ಗ್ರಾಮದ ಬಳಿಯ ತಿರುವಿನಲ್ಲಿ ಮಂಗಳವಾರ ಬೆಳಗಿನ ಜಾವ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ನಗರದ ನಾಲ್ವರು ಮೃತಪಟ್ಟಿದ್ದಾರೆ.

ರಾಹುಲ್ (25), ಖಾಸಿಂ (26) ಉಲ್ಲಾಸ್ (26) ಹಾಗೂ ಆಕಾಶ್ ನಾಗಪ್ಪ (19) ಮೃತಪಟ್ಟಿದ್ದಾರೆ.

ಮೃತಪಟ್ಟ ರಾಹುಲ್ ಮಹಾರಾಷ್ಟ್ರದ ಅಕ್ಕಲಕೋಟದವರು. ಖಾಸಿಂ ಕೋರವಾರ ಗ್ರಾಮದವರು. ಉಲ್ಲಾಸ್ ಅಫಜಲಪುರ ತಾಲ್ಲೂಕಿನ ಗೊಬ್ಬುರ, ಆಕಾಶ್ ಕಲಬುರ್ಗಿ ನಗರದವರು.

ಕಾರಿನಲ್ಲಿದ್ದ ಮತ್ತೊಬ್ಬ ಯುವಕ ಮಲಕಪ್ಪ (22) ಅವವರಿಗೆ ತೀವ್ರ ಗಾಯವಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ತಾಲ್ಲೂಕಿನ ನಂದಿಕೂರ ಗ್ರಾಮದಲ್ಲಿ ಗೆಳೆಯರೊಬ್ಬರಿಗೆ ಮಗುವಾಗಿತ್ತು. ಹೀಗಾಗಿ, ಅವರ ಮನೆಗೆ ತೆರಳಿ ದಂಪತಿ ಹಾಗೂ ಮಗುವನ್ನು ನೋಡಿಕೊಂಡು ರಾತ್ರಿ ಐವರಿದ್ದ ಕಾರು ನಗರಕ್ಕೆ ಬರುತ್ತಿತ್ತು. ನಗರದಿಂದ ತೆರಳುತ್ತಿದ್ದ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ‌ತಿಳಿಸಿದ್ದಾರೆ.

ತಿರುವಿನಲ್ಲಿ ಮೂರು ಸರಣಿ ರೋಡ್‌ ಬ್ರೇಕ್‌ಗಳಿದ್ದು, ಬಲಭಾಗದಲ್ಲಿ ಸಪಾಟಾದ ನೆಲವಿದೆ. ಹೀಗಾಗಿ, ರೋಡ್ ಬ್ರೇಕ್ ತಪ್ಪಿಸಲು ಕಾರು ಎಡಬದಿಯಿಂದ ಬಲಬದಿಗೆ ಬಂದಾಗ ಎದುರಿಗೆ ವೇಗವಾಗಿ ಲಾರಿ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಸೀಟುಗಳು ಕಿತ್ತು ಹಿಂದಕ್ಕೆ ಬಿದ್ದಿದ್ದವು. ಮೃತದೇಹಗಳು ಕಾರಿನಲ್ಲೇ ಇದ್ದವು. ಬೂಟುಗಳು, ಕಾರಿನ ಗಾಜು ಒಡೆದು ರಸ್ತೆಯ ಮೇಲೆ ಬಿದ್ದಿದ್ದವು. ರಾತ್ರಿ ಸ್ಥಳಕ್ಕೆ ಧಾವಿಸಿದ ಸಂಚಾರ ಠಾಣೆಯ ಪೊಲೀಸರು ಕಾರು ಹಾಗೂ ಲಾರಿಗಳನ್ನು ಅಲ್ಲಿಂದ ತೆರವುಗೊಳಿಸಿ ಬೇರೆಡೆ ನಿಲ್ಲಿಸಿದರು. ಸ್ಥಳಕ್ಕೆ ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ (ಸಂಚಾರ) ಸುಧಾ ಆದಿ, ಸಂಚಾರ ಠಾಣೆ –2ರ ಪೊಲೀಸ್ ಇನ್‌ಸ್ಪೆಕ್ಟರ್ ಅಮರೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT