ಕಲಬುರ್ಗಿ: ‘ಇಂಧನ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ವಿದ್ಯಾರ್ಥಿಗಳು ಈ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ನಿಷ್ಠಿ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯ ಆವರಣದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಮತ್ತು ಸಕ್ಷಮ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಇಂಧನ ಸಂರಕ್ಷಣೆ ಜವಾಬ್ದಾರಿ- ಜನರ ಭಾಗಿದಾರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅರಣ್ಯ ಸಂಪತ್ತು ನಶಿಸಿ ಹೋಗುತ್ತಿರುವುದರಿಂದ ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗಿ ನದಿಗಳು ಬತ್ತುತ್ತಿವೆ. ಅನುಕೂಲಕರ ಪರಿಸರ ಇಲ್ಲದ ಕಾರಣಕ್ಕೆ ಕಾಡು ಪ್ರಾಣಿಗಳು ನಶಿಸಿ ಹೋಗುತ್ತಿವೆ. ಆದ್ದರಿಂದ ಪರಿಸರಕ್ಕೆ ನಮ್ಮದೇ ಆದ ಕೊಡುಗೆ ನೀಡುವಂತಹ ಅಂಶಗಳನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಕ್ಷಮ್ ಸಂಯೋಜಕ ಗುರುರಾಜ ಭಂಡಾರಿ ಮಾತನಾಡಿ, ‘ಭಾರತ ಸರ್ಕಾರದ ಅಭಿಯಾನಕ್ಕೆ ಒಳಪಟ್ಟ ಇಂಧನ ಸಂರಕ್ಷಣೆ ಜವಾಬ್ದಾರಿ- ಜನರ ಭಾಗಿದಾರಿ’ ಕಾಯಕ್ರಮದಡಿ ಇದುವರೆಗೆ 20 ಸಾವಿರ ಪ್ರಜ್ಞಾವಂತರನ್ನು ತಲುಪಿದ್ದೇವೆ. ಇಂದಿನ ಮಕ್ಕಳು ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳಾಗಬೇಕು. ಬೈಕ್ ರ್ಯಾಲಿ, ಅನವಶ್ಯಕ ವಾಹನ ಬಳಕೆಯನ್ನು ತಪ್ಪಿಸುವ ಮೂಲಕ ಭವಿಷ್ಯಕ್ಕೆ ಇಂಧನವನ್ನು ಉಳಿಸಬೇಕು’ ಎಂದು ಸಲಹೆ ನೀಡಿದರು.
ಹೋರಾಟಗಾರ ಲಕ್ಷ್ಮಣ ದಸ್ತಿ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಪಾಟೀಲ ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ, ನಿವೃತ್ತ ನ್ಯಾಯಾಧೀಶ ಎಫ್.ಎ.ನೂರ್, ಶಿವರಾಜ ತಿವಾರಿ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ದರಾಮಯ್ಯ ಹಿರೇಮಠ, ಆಯುರ್ವೇದ ತಜ್ಞ ಡಾ. ನಾಗನಾಥ ವಿ.ಯಾದ್ಗೀರ್ ಇದ್ದರು.