ಕಲಬುರ್ಗಿ: ಇಲ್ಲಿಯ ಸಂಗಮೇಶ್ವರ ಮಹಿಳಾ ಮಂಡಳದ ಮೇ ಫ್ಲವರ್ ನರ್ಸರಿಯು ‘ಬೆಳೆಯಿಂದ ಇಳೆ’ ಮತ್ತು ‘ಗ್ರೀನ್ ಡೇ’ಯನ್ನು ಆಯೋಜಿಸಲಾಗಿತ್ತು.
ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಅತಿಥಿಗಳು ಹಸಿರು ಉಡುಪಿನಲ್ಲಿ ಬಂದಿದ್ದರು.ಇದರಿಂದ ಮಹಿಳಾ ಮಂಡಳದ ಅಂಗಳವೆಲ್ಲಿ ಹಸಿರಿನಿಂದ ಕಂಗೊಳಿಸುತಿತ್ತು.
ಕುಂಡದಲ್ಲಿ ಜೋಳ ಹಾಗೂ ಗೋದಿಬೀಜ ಹಾಕುವ ಕ್ರಮವನ್ನು ಪ್ರತಿಯೊಂದು ಮಗುವಿಗೆ ವಾರದ ಮುಂಚೆ ಪ್ರಾಯೋಗಿಕವಾಗಿ ಕಲಿಸಿಕೊಡಲಾಗಿತ್ತು. ಅಲ್ಲದೆ ಅದನ್ನು ಮನೆಯಲ್ಲಿ ನೀರು ಹಾಕಿ ಬೆಳೆಸಲು ಸೂಚಿಸಲಾಗಿತ್ತು. ಬೆಳೆಯ ಕುಂಡವನ್ನು ಅವರು ಪ್ರದರ್ಶನಕ್ಕೆ ತಂದಿದ್ದವು.
ಮುಖ್ಯ ಅತಿಥಿಯಾಗಿದ್ದ ಕಲಬುರ್ಗಿ ಆಕಾಶವಾಣಿಯ ಕೃಷಿ ತಜ್ಞ ಡಾ.ಸೋಮಶೇಖರ ರುಳಿ, ಸೊಂಪಾದ ಸಸಿ ಬೆಳೆಸಿದ ಮೂರು ವಿಭಾಗದ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ಭಾಗವಹಿಸಿದ್ದ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಿದರು. ಮರಗಳ ಮಹತ್ವ ಮತ್ತು ಅವುಗಳನ್ನು ಬೆಳೆಸುವ ಬಗೆಯನ್ನು ವಿವರಿಸಿದರು.
ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ವೈಶಾಲಿ ದೇಶಮುಖ, ಗಿಡಮರಗಳನ್ನು ಪ್ರೀತಿಸುವುದನ್ನು ಪಾಲಕರು ಮಕ್ಕಳಿಗೆ ಕಲಿಸಬೇಕು. ಇದರಿಂದ ಮಗುವಿಗೆ ಪರಿಸರದ ನಂಟು ಬೆಳೆಯುತ್ತದೆ. ಹಾಗಾದರೆ ಹಸಿರೇ ಉಸಿರಾಗುತ್ತದೆ ಎಂದರು.
ವನದೇವತೆ, ಜಂಗಲ್ ಗರ್ಲ್, ಗಿಳಿ, ಆದಿಮಾನವ– ಹೀಗೆ ಅನೇಕ ವೇಷ ಧರಿಸಿಬಂದಿದ್ದ ಮಕ್ಕಳನ್ನು ಅಭಿನಂದಿಸಿದರು.
ಶಿಕ್ಷಕಿಯರಾದ ಶಕುಂತಲಾ ರೆಡ್ಡಿ, ರಾಜಶ್ರೀ ,ಕಸ್ತೂರಿಬಾಯಿ, ಯಶೋಧಾ ಹಾಗೂ ಜಯಶ್ರೀ, ಎಲ್ಲಮ್ಮ, ಅಂಜಲಿ ಇದ್ದರು.
ಹಿರಿಯ ಲೇಖಕಿ ಸಂಧ್ಯಾ ಹೊನಗುಂಟಿಕರ್ ನಿರೂಪಿಸಿದರು. ಮಂಡಳದ ಕಾರ್ಯದರ್ಶಿ ಶೋಭಾ ರಂಜೋಳಕರ್ ವಂದಿಸಿದರು.