ಕಲಬುರ್ಗಿ: ಖಾಸಗಿ ಶಾಲಾ–ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರಿಗೆ ಕೋವಿಡ್–19 ವಿಶೇಷ ಆರ್ಥಿಕ ಪ್ಯಾಕೆಜ್ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಉಪನ್ಯಾಸಕರು ಗುರುವಾರ ಆನ್ಲೈನ್ ಚಳವಳಿ ನಡೆಸಿದರು.
‘ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ಸಮಾಜವನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರವಹಿಸುವ ಶಿಕ್ಷಕ ಸಮುದಾಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರೂ ತಮ್ಮ ಬದುಕನ್ನು ಅಲ್ಪಸ್ವಲ್ಪ ಗೌರವದಿಂದ ಸಾಗಿಸುತ್ತಿದ್ದ ಶಿಕ್ಷಕರು, ಉಪನ್ಯಾಸಕರಿಗೆ ಈಗ ಸಂಪೂರ್ಣವಾಗಿ ಅನಿಶ್ಚಿತತೆ ಆವರಿಸಿದೆ.
ಕಳೆದ 14 ತಿಂಗಳುಗಳಿಂದ ಸಂಬಳವಿಲ್ಲದೇ, ಬೇರೆ ಉದ್ಯೋಗವೂ ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ.’ ಎಂದು ಸಮಿತಿಯ ಜಿಲ್ಲಾ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ. ತಿಳಿಸಿದರು.
ಖಾಸಗಿ ಶಾಲಾ–ಕಾಲೇಜುಗಳ ಶಿಕ್ಷಕವೃಂದಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡುವುದರ ಜೊತೆಗೆ ಉದ್ಯೋಗ ಭದ್ರತೆ ಕಲ್ಪಿಸಿಬೇಕು. ಯಾವುದೇ ಕಾರಣಕ್ಕೂ ಇವರನ್ನು ಕೆಲಸದಿಂದ ತೆಗೆದು ಹಾಕದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಿತಿ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪೂರ, ವಿಶಾಲಾಕ್ಷಿ, ಅಶ್ವಿನಿ, ಭೀಮಾಶಂಕರ ಪಾಣೆಗಾಂವ ಹಾಗೂ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.