ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರನ್ನು ಕೈಬಿಡದಿರಲು ಒತ್ತಾಯ

ಕಲಬುರ್ಗಿಯಲ್ಲಿ ಹೋರಾಟ ಸಮಿತಿಯಿಂದ ಪ್ರತಿಭಟನೆ
Last Updated 23 ಸೆಪ್ಟೆಂಬರ್ 2020, 14:44 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದು, ಕೆಲವರು 20–25 ವರ್ಷಗಳಿಂದ ನಿರಂತರವಾಗಿ ‘ಅತಿಥಿ’ಗಳಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸಕ್ಕೆ ಭದ್ರತೆ ಇಲ್ಲವಾಗಿದೆ. ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿಬುಧವಾರ ಪ್ರತಿಭಟನೆ ನಡೆಸಿದರು.

’ಲಾಕ್‍ಡೌನ್ ಸಮಯದಲ್ಲಿ ತಮ್ಮ ಕೈಯಿಂದಲೇ ಖರ್ಚನ್ನು ಭರಿಸಿ ಆನ್‍ಲೈನ್ ತರಗತಿಗಳನ್ನೂ ಕೂಡ ಅವರು ನಡೆಸಿದ್ದಾರೆ. ಯುಜಿಸಿಯು ಮಾರ್ಚ್ 24ರಿಂದ ಜುಲೈ 31ರವರೆಗಿನ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕೆಂದು ನಿರ್ದೇಶನ ನೀಡಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ‘ ಎಂದು ಬೇಸರ ವ್ಯಕ್ತಪಡಿಸಿದರು.

2019ರ ಜನವರಿಯಲ್ಲಿ ಯುಜಿಸಿ ಸುತ್ತೋಲೆಯು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ ₹ 1,500 ಅಥವಾ ಮಾಸಿಕ ₹ 50 ಸಾವಿರದವರೆಗೆ ವೇತನವನ್ನು ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ಇಂದಿಗೂ ನಮ್ಮ ರಾಜ್ಯದಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೆಟ್, ಸೆಟ್ ಅಥವಾ ಪಿಎಚ್‍.ಡಿ ಆಗಿರುವವರಿಗೆ ಮಾಸಿಕ ₹ 13 ಸಾವಿರ, ಉಳಿದವರಿಗೆ ₹ 11 ಸಾವಿರ ನೀಡಲಾಗುತ್ತದೆ. ಇನ್ನೊಂದೆಡೆ ಕಳೆದ 4–5 ತಿಂಗಳುಗಳಿಂದ ಅವರಿಗೆ ಆ ವೇತನವೂ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಈ ಶೈಕ್ಷಣಿಕ ವರ್ಷಕ್ಕೆ ಆರ್ಥಿಕ ಮಿತವ್ಯಯದ ನೆಪ ಮುಂದು ಮಾಡಿಕೊಂಡು ಸರ್ಕಾರವು ಅತಿಥಿ ಉಪನ್ಯಾಸಕರನ್ನು ಮುಂದುವರೆಸದೆ ಇರುವ ಅಥವಾ ಕೈಬಿಡುವ ಬಗ್ಗೆ ಮಾತು ಕೇಳಿಬರುತ್ತಿದೆ. ಇದು ಅವರನ್ನು ಇನ್ನಷ್ಟು ಹತಾಶರನ್ನಾಗಿಸಿದೆ. ಸರ್ಕಾರವು ಗಾಯದ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈಹಾಕಬಾರದು. ಕೂಡಲೇ ಸರ್ಕಾರವು ಸೇವಾ ಭದ್ರತೆ ಒದಗಿಸಬೇಕು ಹಾಗೂ ಬಾಕಿ ಇರುವ ವೇತನವನ್ನು ಒಂದೇ ಬಾರಿಗೆ ಈ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಜಗಪ್ಪ ತಳವಾರ, ಜಿಲ್ಲಾ ಸಂಯೋಜಕ ನಿಂಗಣ್ಣ ಜಂಬಗಿ, ಸಮಿತಿಯ ಮುಖಂಡರಾದ ಜಗನ್ನಾಥ ಎಸ್.ಎಚ್, ಭೀಮಾಶಂಕರ ಪಾಣೆಗಾಂವ, ಮಲ್ಲಿನಾಥ ಹುಂಡೇಕಲ್, ಅತಿಥಿ ಉಪನ್ಯಾಸಕರಾದ ಡಾ.ಶರಣಬಸಪ್ಪ ಮೈಸಲಗಿ, ಡಾ.ವಿಶ್ವನಾಥ ಬೆಲ್ಲದ, ಡಾ ರುಕ್ಮಿಣಿ, ಡಾ ಪ್ರಕಾಶ ತಳವಾರ, ಡಾ.ಶಾಂತಪ್ಪ ರಾಠೋಡ, ಡಾ.ಮಲ್ಲಿಕಾರ್ಜುನ ಹೂಗಾರ, ಅರುಣಾ ತಂಬಾಕಿ, ಡಾ.ಮಾಣಿಕಪ್ಪ, ಡಾ.ವಿಜಯಕುಮಾರ ಮೂರ್ತಿ, ಡಾ ನಾಗೇಂದ್ರ ನಂದಾ, ಅಣವೀರಪ್ಪ ಬೋಳೆವಾಡ, ರಾಜಪ್ಪ ರಟಕಲ್, ಚಂದ್ರಶೇಖರ್ ಅಕ್ಕರಕಿ, ಡಾ.ಜ್ಯೋತಿ ರದ್ದೇವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT