ಗುಲಬರ್ಗಾ ವಿ.ವಿ. ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ‘ಕಲೆಯು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಕೆಲವರನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಎಲ್ಲ ಜ್ಞಾನ ಶಿಸ್ತುಗಳಿಗೆ ಜಾನಪದವೇ ತಾಯಿ ಬೇರು. ಅಲ್ಲಿಂದ ಬಂದ ಕಲೆ, ಸಾಹಿತ್ಯ ಎಲ್ಲ ಆಧುನಿಕತೆ ಎದುರುಗಡೆ ನಗಣ್ಯವಾಗುತ್ತಿದೆ. ಶಿಷ್ಟ ಸಂಗೀತದ ಎದುರು ಜನಪದ ಸಂಗೀತವು ಅಸ್ಪೃಶ್ಯ ಎಂಬ ಭಾವನೆ ಬೆಳೆದಿದೆ. ಕೆಲವು ಕಲೆಗಳು ಒಂದು ಜಾತಿಯವರಿಗೆ ಸೀಮಿತ ಎಂಬ ಭಾವನೆ ಬೆಳೆದಿದೆ. ಹಲಗೆ, ಡೊಳ್ಳನ್ನು ತಳ ಸಮುದಾಯದವರೇ ಬಡಿಯಬೇಕು. ಭರತನಾಟ್ಯವನ್ನು ಒಡ್ಡೋಲಗದಲ್ಲೇ ಪ್ರದರ್ಶಿಸಬೇಕು ಎಂಬ ಅಘೋಷಿತ ಕಟ್ಟುಪಾಡುಗಳು ಬೆಳೆದು ಬಂದಿವೆ. ಇದು ತಪ್ಪಿ ಎಲ್ಲರೂ ಎಲ್ಲ ಕಲೆಗಳನ್ನು ಕಲಿಯುವ ಅವಕಾಶ ಕೂಡಿ ಬರಬೇಕು’ ಎಂದು ಅಭಿಪ್ರಾಯಪಟ್ಟರು.