ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲೆಂಬೊ ಬಯಲು, ಗಾಂಧಿ ಪ್ರತಿಮೆ ಕೃತಿ ಬಿಡುಗಡೆ

ಪೋತೆ ಅವರ ಕೃತಿಗಳಲ್ಲಿ ಮೂರು ತಲೆಮಾರುಗಳ ಸಂಘರ್ಷಮಯ ಬದುಕಿನ ಅನಾವರಣ
Last Updated 11 ಜನವರಿ 2021, 12:24 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ಅವರ ಬಯಲೆಂಬೊ ಬಯಲು ಬಯೋಪಿಕ್ ಕಾದಂಬರಿ, ಕಾಲದ ಕೆಂಡಗಳ ನಡುವೆ (ಕಥಾ ಸಂಕಲನ) ಹಾಗೂ ಗಾಂಧಿ ಪ್ರತಿಮೆ (ಪ್ರಬಂಧ ಸಂಕಲನ) ಕೃತಿಗಳನ್ನು ಲೋಪಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ‘ವೈಚಾರಿಕ ಹಿನ್ನೆಲೆಯಲ್ಲಿ ಪೋತೆ ಅವರ ಪ್ರತಿಭೆ ಅದ್ಭುತವಾದದ್ದು. ಅಂಬೇಡ್ಕರ್ ಚಿಂತನೆ ಅವರ ಉಸಿರು’ ಎಂದರು.

ಬಯಲೆಂಬೊ ಬಯಲು ಕಾದಂಬರಿ ಕುರಿತು ಮಾತನಾಡಿದ ಪ್ರೊ. ಸಿದ್ದು ಯಾಪಲಪರವಿ, ‘ಒಬ್ಬ ದಲಿತ ತನ್ನ ಪರಿಸರದ ಕೃತಿಯನ್ನು ಏಕೆ ಬರೆಯುತ್ತಾನೆ ಎಂದರೆ ಆದ ಅನುಭವಗಳನ್ನು ಮನಸ್ಸಿನಲ್ಲಿ ಇಟ್ಟಿಕೊಂಡಿರುತ್ತಾನೆ. ಅದರಿಂದ ಹೊರಬರಬೇಕಾದರೆ ಬರವಣಿಗೆ ಅಗತ್ಯವಾಗಿರುತ್ತದೆ. ತದ ನಂತರ ಆತ ಬೇರೆಯ ವಿಷಯದ ಬಗ್ಗೆ ಬರೆಯುತ್ತಾನೆ. ಪ್ರೊ. ಪೋತೆಯವರು ತಮ್ಮ ಕೃತಿಯಲ್ಲಿ ಬಳಸಿರುವ ಭಾಷೆ ಇಂಡಿಯ ಭಾಷೆ. ಈ ಭಾಷೆಯ ದೃಷ್ಟಿಯಿಂದ ಕೃತಿ ತುಂಬಾ ಶ್ರೇಷ್ಠವಾಗಿದೆ. ಇನ್ನು ಕೃತಿಯಲ್ಲಿ ತುಂಬಿರುವ ಮೂರು ತಲೆಮಾರುಗಳ ಸಂಘರ್ಷಮಯ ಬದುಕು ಇವತ್ತಿನ ಯುವಕರಿಗೆ ಅದು ಮಾದರಿಯಾಗುವಂತದ್ದು’ ಎಂದರು.

ಲೇಖಕ ಪ್ರೊ. ವಿಕ್ರಮ ವಿಸಾಜಿ ‘ಕಾಲದ ಕೆಂಡಗಳ’ ನಡುವೆ ಕಥಾ ಸಂಕಲನ ಮತ್ತು ಗಾಂಧಿ ಪ್ರತಿಮೆ ಪ್ರಬಂಧ ಸಂಕಲನ ಕುರಿತು ಮಾತನಾಡಿ, ಕಾಲದ ಕೆಂಡಗಳ ನಡುವೆ ಕಥಾ ಸಂಕಲನವು ಅಂಬೇಡ್ಕರ್ ವಿಚಾರ ಧಾರೆಯನ್ನು ಕೇಂದ್ರಿತವಾದ್ದು, ವೈಚಾರಿಕ ಹಿನ್ನಲೆವುಳ್ಳದ್ದಾಗಿದೆ. ಗಾಂಧಿ ಪ್ರತಿಮೆ ಪ್ರಬಂಧ ಸಂಕಲನವು ಅವರ ಮೂಲ ಚಿಂತನೆಗಳಿಗೆ ಸ್ವಲ್ಪ ಭಿನ್ನ ಆಯಾಮ ನೀಡಿದೆ. ಇತ್ತೀಚಿಗೆ ಅವರ ಬರಹವು ಬೇರೆ ಆಯಾಮದ ಕಡೆ ತಿರುಗಿರುವುದನ್ನು ಗಾಂಧಿ ಪ್ರತಿಮೆ ಸೂಚಿಸುತ್ತದೆ. ಅಲ್ಲದೆ ಒಬ್ಬ ಲೇಖಕನಿಗೆ ಒಂದೇ ಮಾರ್ಗ ಪಥವಲ್ಲ, ಬದಲಾವಣೆ ಅಗತ್ಯವೂ ಆಗುತ್ತದೆ ಎಂದು ಹೇಳಿದರು.

ಪ್ರೊ. ಎಚ್.ಟಿ. ಪೋತೆ ಮಾತನಾಡಿ, ತಮ್ಮ ಬರಹದ ಮೂಲ ಶಕ್ತಿ ಅಂಬೇಡ್ಕರ್‌ವಾದ. ಇದರಲ್ಲಿ ಯಾವ ಸಂಶಯವಿಲ್ಲ. ಜೊತೆಗೆ ಅಪ್ಪ–ಅವ್ವ ನನ್ನನ್ನು ಲೇಖಕನನ್ನಾಗಿ ಮಾಡಲು ಬಹಳ ಶ್ರಮಿಸಿದರು. ಇಂದಿನ ಸಮಾಜದಲ್ಲಿ ಮಾನವೀಯತೆ ಮನುಷ್ಯತ್ವ, ಪ್ರೀತಿ, ನಂಬಿಕೆ ಕೇವಲ ತೋರಿಕೆಯಾಗಿವೆ. ಅವುಗಳನ್ನು ಯಾರೂ ಪಾಲಿಸುತ್ತಿಲ್ಲ ಮೇಲೊಂದು ಮಾತು ಹೊರಗೊಂದು ಮಾತು ಆಡುವ ಜನರೇ ಹೆಚ್ಚಾಗಿದ್ದಾರೆ. ಇನ್ನೂ ಜಾತೀಯತೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಇವೆಲ್ಲ ಹೋಗಬೇಕು ಎಂದರು.

ಹಂಗಾಮಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಮಾತನಾಡಿದರು.

ಡಾ. ಎಂ.ಬಿ. ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಿ ವಚನ ಗಾಯನ ಮಾಡಿದರು. ಡಾ. ವಿಜಯಕುಮಾರ ಬೀಳಗಿ ನಿರೂಪಿಸಿದರು.

ಡಾ. ಲಕ್ಷ್ಮಣ ರಾಜನಾಳ್ಕರ್, ಡಾ. ಬಸವರಾಜ ಸಣ್ಣಕ್ಕಿ, ಡಾ. ವಿ.ಟಿ. ಕಾಂಬಳೆ, ಡಾ. ಗವಿಸಿದ್ಧ ಪಾಟೀಲ, ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಅಮೃತಾ ಕಟಕೆ, ಸುರೇಶ ಬಡಿಗೇರ, ಡಾ. ಸಂಗಪ್ಪ ಹೊಸಮನಿ, ಅಪ್ಪಾರಾವ ಅಕ್ಕೋಣಿ, ಪ್ರೊ. ಈಶ್ವರ ಇಂಗನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT