ಕಲಬುರಗಿ: ‘ರಾಜ್ಯ ಸರ್ಕಾರದ ಸಚಿವರೊಬ್ಬರು ನಿಯಮ ಉಲ್ಲಂಘಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದನ್ನು ನಾಳೆ ದಾಖಲೆಗಳ ಸಮೇತ ಅಕ್ರಮ ಬಯಲಿಗೆ ಎಳೆಯುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ‘ಅಕ್ರಮ ಎಸಗಿದ್ದ ದಾಖಲೆಗಳನ್ನು ಸದನದಲ್ಲಿಯೇ ಬಿಡುಗಡೆ ಮಾಡುತ್ತೇನೆ. ನಾಳೆಯವರೆಗೂ ಕಾಯಿರಿ. ಯಾವ ಸಚಿವರು, ಅವರ ಹೆಸರು ಏನು ಎಂಬುವುದು ಎಲ್ಲವೂ ನಾಳೆ ಸದನದಲ್ಲಿ ಬಹಿರಂಗವಾಗಲಿದೆ’ ಎಂದರು.
‘ನಾನು ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುವುದಿಲ್ಲ. ಹಿಟ್ ಆ್ಯಂಡ್ ರನ್ ಅಲ್ಲ. ನನ್ನ ಬಗ್ಗೆ ಹಗುರವಾಗಿ ಏಕವಚನದಲ್ಲಿ ಮಾತನಾಡಿದ ಆ ಸಚಿವರಿಗೆ ಇದು ಸಣ್ಣ ನಿದರ್ಶನ ಮಾತ್ರ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವೆ’ ಎಂದು ಹೇಳಿದರು.