ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಭಾಗದ ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಧಾರಾಕಾರ ಹಾಗೂ ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.
ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚು ಅಂದರೆ; 62.1 ಮಿ.ಮೀ,ಅಫಜಲಪುರ ತಾಲ್ಲೂಕಿನಲ್ಲಿ 40.1 ಮಳೆ ರಾತ್ರಿಯೇ ಸುರಿದಿದೆ. ಉಳಿದಂತೆ, ಕಲಬುರ್ಗಿ ನಗರ– 16 ಮಿ.ಮೀ., ನೆಲೋಗಿ ಗ್ರಾಮ– 42 ಮಿ.ಮೀ., ಜೇವರ್ಗಿ ತಾಲ್ಲೂಕು– 17 ಮಿ.ಮೀ., ಸೇಡಂ ತಾಲ್ಲೂಕು– 17.2 ಮಿ.ಮೀ ಆಗಿದೆ.
ಇನ್ನೊಂದೆಡೆ, ಬೀದರ್ ನಗರದಲ್ಲಿ ಶನಿವಾರ ಬೆಳಿಗ್ಗೆ 8ರವರೆಗೆ 21 ಮಿ.ಮೀ. ಮಳೆಯಾಗಿದೆ. ಕೊಪ್ಪಳ ಜಿಲ್ಲೆ– 12 ಮಿ.ಮೀ., ರಾಯಚೂರು ಜಿಲ್ಲೆ 12 ಮಿ.ಮೀ., ಯಾದಗಿರಿ ಜಿಲ್ಲೆ 16 ಮಿ.ಮೀ ಮಳೆಯಾಗಿದೆ ಎಂದುಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಶುಕ್ರವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆದರೂ ಈ ಭಾಗದ ಜಿಲ್ಲಾ ಕೇಂದ್ರಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ರಿಂದ 34 ಸೆಲ್ಸಿಯಸ್ ಇತ್ತು. ಸದ್ಯ ಸುರಿದ ಮಳೆಯಿಂದಾಗಿ 32 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.
ಗ್ರಾಮ ವಾಸ್ತವ್ಯ ರದ್ದು:
ಕಲಬುರ್ಗಿ ತಾಲ್ಲೂಕಿನ ಹೇರೂರ(ಬಿ) ಗ್ರಾಮದಲ್ಲೂ ವಿಪರೀತ ಮಳೆ ಸುರಿದ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ (ಜೂನ್ 22)ವನ್ನು ರದ್ದುಪಡಿಸಲಾಯಿತು. ಶನಿವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಮಳೆಯ ಅವಾಂತರಗಳನ್ನು ಪರಿಶೀಲಿಸಿದರು.